ಕಾರ್ಕಳ

ಕ್ರೈಸ್ಟ್‌ಕಿಂಗ್: ಅಚೀವರ್ಸ್ ದಿನಾಚರಣೆ

ಕಾರ್ಕಳ: ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಂಸ್ಥೆಯ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸುವ ಅಚೀವರ್ಸ್ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.


ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಖ್ಯಾತ ನ್ಯಾಯವಾದಿಗಳಾದ ಜಾರ್ಕಳದ ಸದಾನಂದ ಸಾಲ್ಯಾನ್ ಇವರು ಆಗಮಿಸಿದ್ದರು. ಅವರು ಮಾತನಾಡಿ “ಶಿಕ್ಷಣ ನಮ್ಮೆಲ್ಲರ ಬದುಕಿನ ಶಕ್ತಿ, ದಾರಿದೀಪ ಇದ್ದ ಹಾಗೆ. ಸಾಧಕರು ಸಾಧನೆಯ ಶಿಖರವನ್ನು ಏರಲು ಅದೆಷ್ಟೋ ಕಠಿಣ ಶ್ರಮವಹಿಸಬೇಕು. ಮಗುವಿನ ಪೋಷಕರು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ವರ ನೀಡುವ ದೇವರ ರೂಪವಾಗಿ ಮೂಡಿ ಬರಬೇಕು, ಪೋಷಕರು ಸಮಯವನ್ನು ಮೊಬೈಲ್‌ನಲ್ಲಿ ಕಳೆಯುವುದರ ಬದಲು ಮಗುವಿನ ಜೊತೆ ಕಳೆಯಬೇಕು” ಎಂದು ಹೇಳಿದರು.


ಇನ್ನೋರ್ವ ಅತಿಥಿ ರೋಟರಿ ಕ್ಲಬ್ ಕಾರ್ಕಳದ ನಿಕಟಪೂರ್ವ ಅಧ್ಯಕ್ಷ ಇಕ್ಬಾಲ್ ಅಹಮದ್ ಅವರು ಮಾತನಾಡಿ “ತಂದೆ-ತಾಯಿ, ಗುರುಗಳ ಆಶೀರ್ವಾದ ಹಾಗೂ ಕಠಿಣ ಅಭ್ಯಾಸ ಇದ್ದಾಗ ಮಾತ್ರ ಗೆಲುವು ನಮ್ಮದಾಗುತ್ತದೆ, ಮಕ್ಕಳು ಸಾಧನೆಯ ಹಾದಿಯಲ್ಲಿ ಅಡೆತಡೆಗಳನ್ನು ಮೆಟ್ಟಿ ಮುನ್ನಡೆಯಬೇಕು” ಎಂದು ಹೇಳಿದರು.

ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಪಾಧ್ಯಕ್ಷ, ರಾಧಾನಾಯಕ್ ಸರಕಾರಿ ಪ್ರೌಢಶಾಲೆ ಎಣ್ಣೆಹೊಳೆ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕ ರಾಜಾರಾಮ್ ಶೆಟ್ಟಿ ಮಾತನಾಡಿ “ಜೀವನದಲ್ಲಿ ಒಗ್ಗಟ್ಟಿದ್ದರೆ ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯ, ನಮ್ಮ ಪ್ರಾಮಾಣಿಕವಾದ ಸೇವೆ ಸಮಾಜದಲ್ಲಿ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಸಹಕಾರಿ” ಎಂದು ಹೇಳಿದರು.

ಕಾರ್ಕಳ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಗಣಪಯ್ಯ ಮಾತನಾಡಿ “ಮಕ್ಕಳು ಅಮೂಲ್ಯವಾದ ರತ್ನಗಳು. ಈ ರತ್ನಗಳು ಸಮಾಜದಲ್ಲಿ ಹೇಗೆ ಬದುಕಬೇಕೆಂಬುದನ್ನು ಪೋಷಕರಾದ ನಾವುಗಳು ತಿಳಿಸಿಕೊಡಬೇಕು” ಎಂದು ಹೇಳಿದರು.

ಕ್ರೈಸ್ಟ್‌ಕಿಂಗ್ ಎಜುಕೇಷನ್ ಟ್ರಸ್ಟ್‌ನ ಸದಸ್ಯರಾದ ಡಾ.ಪೀಟರ್ ಫೆರ್ನಾಂಡೀಸ್ ಅವರು ಮಾತನಾಡಿ “ಕೇವಲ ಅಂಕಗಳಿಗೋಸ್ಕರ ಮಕ್ಕಳು ಸೀಮಿತವಾಗದೆ ಸಮಾಜದಲ್ಲಿ ಹೇಗೆ ಬದುಕಬೇಕು ಎಂದು ವಿಷಯಗಳನ್ನು ಮೊದಲು ನಾವು ತಿಳಿದುಕೊಳ್ಳಬೇಕು. ಶ್ರಮ, ಶಿಸ್ತು, ತಾಳ್ಮೆ, ನಿರ್ಭಯತೆ ಇದ್ದಾಗ ಮಾತ್ರ ನಾವು ಯಶಸ್ಸು ಕಾಣಲು ಸಾಧ್ಯ” ಎಂದು ಹೇಳಿದರು.

ಸಂಸ್ಥೆಯ ಪದವಿ ಪೂರ್ವ ವಿಭಾಗದ ಪ್ರಾಚಾರ್ಯರಾದ ಲಕ್ಷ್ಮೀನಾರಾಯಣ ಕಾಮತ್ ಪ್ರಸ್ತಾವನೆಗೈದರು. ಕ್ರೈಸ್ಟ್‌ಕಿಂಗ್ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಅವೆಲಿನ್ ಲೂಯಿಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ೨೦೨೫-೨೬ನೇ ಶೈಕ್ಷಣಿಕ ಸಾಲಿನಲ್ಲಿ ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ, ವೈಜ್ಞಾನಿಕ ವಿಭಾಗಗಳಲ್ಲಿ ತಾಲೂಕು, ಜಿಲ್ಲೆ, ವಿಭಾಗ, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.

ಪೆರ್ವಾಜೆ ಸುಂದರ ಪುರಾಣಿಕ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್, ಬಜಗೋಳಿ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್, ಸಂಸ್ಥೆಯ ಉಪ ಪ್ರಾಚಾರ್ಯ ಡಾ.ಪ್ರಕಾಶ್ ಭಟ್, ಮುಖ್ಯ ಶಿಕ್ಷಕರಾದ ಪ್ರೌಢಶಾಲಾ ವಿಭಾಗದ ಶ್ರೀಮತಿ ಜೋಸ್ನ ಸ್ನೇಹಲತಾ, ಪ್ರಾಥಮಿಕ ವಿಭಾಗದ ರುಡಾಲ್ಫ್ ಕಿಶೋರ್ ಲೋಬೊ, ಸಂಸ್ಥೆಯ ಆಪ್ತ ಸಮಾಲೋಚಕಿಯಾದ ಡಾ.ಸಿ. ಶಾಲೆಟ್ ಸೀಕ್ವೇರಾ, ಆಡಳಿತಾಧಿಕಾರಿಯಾದ ಕಿರಣ್ ಕ್ರಾಸ್ತ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಪದವಿಪೂರ್ವ ವಿಭಾಗದ ದಯಾನಂದ ಮಲೆಬೆಟ್ಟು, ಪ್ರಾಥಮಿಕ ವಿಭಾಗದ ಉದಯರವಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಂಸ್ಥೆಯ ಕ್ರೀಡಾ ಸಾಧನೆಗೆ ಕಾರಣಿಕರ್ತರಾದ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಕೃಷ್ಣಪ್ರಸಾದ್, ಪ್ರಕಾಶ್ ನಾಯ್ಕ್, ಶ್ರೀಮತಿ ಲಾವಣ್ಯ ಅವರನ್ನು ಶಾಲು ಹೊದೆಸಿ ಗೌರವಿಸಲಾಯಿತು. ಶಿಕ್ಷಕಿಯರಾದ ಶ್ರೀಮತಿ ಜಯಲಕ್ಷ್ಮೀ, ಶ್ರೀಮತಿ ಆಲಿಸ್ ಲೋಬೊ, ಶ್ರೀಮತಿ ನೀತಿ ಆಚಾರ್ಯ, ಉಪನ್ಯಾಸಕಿಯರಾದ ಶ್ರೀಮತಿ ಭಾರತಿ ನಾಯಕ್, ಶ್ರೀಮತಿ ಸುನೀತಾ ಸಾಲಿಯಾನ್, ಶ್ರೀಮತಿ ಪಾವನಾ ಧನ್ಯರಾಜ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಶ್ರೀಮತಿ ನಾಗಲಕ್ಷ್ಮೀ ಸ್ವಾಗತಿಸಿ ಉಪನ್ಯಾಸಕಿ ಶ್ರೀಮತಿ ಶಿಜಿ ಸಿ ಕೆ ವಂದಿಸಿದರು. ಉಪನ್ಯಾಸಕ ಉಮೇಶ್ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.

Related posts

ಫೆಲೋಶಿಪ್: ಅರ್ಜಿ ಆಹ್ವಾನ

Madhyama Bimba

ಪಳ್ಳಿ: ಕಿಶನ್ ಪ್ರಭುರವರಿಗೆ ಆಪ್ತಮಿತ್ರ ಪ್ರಶಸ್ತಿ

Madhyama Bimba

ಹೆಬ್ರಿಯಲ್ಲಿ ಹಣ ಕಳವು- ಪ್ರಕರಣ ದಾಖಲು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More