ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದಲ್ಲಿ ಅಂತರರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನಾಚರಣೆಯನ್ನು (ICCD) ಹೃದಯಸ್ಪರ್ಶಿ ಕಾರ್ಯಕ್ರಮದ ಮೂಲಕ ಆಚರಿಸಲಾಯಿತು. ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಮಕ್ಕಳು, ಅವರ ಪಾಲಕರು ಹಾಗೂ ಕ್ಯಾನ್ಸರ್ ಗೆದ್ದ ಬದುಕಿನ ಹೋರಾಟಗಾರರು ಒಂದಾಗಿ ಸೇರಿ ಜಾಗೃತಿ ಮೂಡಿಸಿ, ಧೈರ್ಯಶಾಲಿ ಮಕ್ಕಳಿಗೆ ಬೆಂಬಲ ಸೂಚಿಸಿದರು. ಈ ಕಾರ್ಯಕ್ರಮವು 2024–2026 ರ ಅವಧಿಗೆ ರೂಪಿಸಲಾದ ಮೂರು ವರ್ಷದ ಅಭಿಯಾನದ ಭಾಗವಾಗಿದ್ದು, “ಇನ್ಸ್ಫೈರಿಂಗ್ ಆಕ್ಷನ್ ” ಎಂಬ ಧ್ಯೇಯವಾಕ್ಯವನ್ನು ಹೊಂದಿದೆ.

ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಹಾಗೂ ಅವರ ಕುಟುಂಬಗಳ ಮನೋಬಲ ಹೆಚ್ಚಿಸುವ ಉದ್ದೇಶದಿಂದ ಮನರಂಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಕೆ ಎಂ ಸಿ ಮಣಿಪಾಲದ ಡೀನ್ ಡಾ. ಅನಿಲ್ ಕೆ ಭಟ್, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ, ನರ್ಸಿಂಗ್ ಮುಖ್ಯಸ್ಥೆ ಡಾ. ಸುಬಾ ಸೂರಿಯಾ, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ನ ಸಂಸ್ಥಾಪಕರಾದ ಶ್ರೀ ಅರ್ಜುನ್ ಭಂಡಾರ್ಕರ್ ಹಾಗೂ ಲಯನ್ಸ್ ಕ್ಲಬ್ ಮಣಿಪಾಲದ ಅಧ್ಯಕ್ಷರಾದ ಡಾ. ನಿಶಾಂತ್ ಬಿ ಭಟ್ ಉಪಸ್ಥಿತರಿದ್ದರು.
ಡಾ. ಅನಿಲ್ ಕೆ ಭಟ್ ಅವರು ಈ ಕಾರ್ಯಕ್ರಮಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿ, ಬಾಲ್ಯ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಸಮುದಾಯದ ಪಾತ್ರ ಅತ್ಯಂತ ಮಹತ್ವದ್ದೆಂದು ಹೇಳಿದರು. ಪ್ರತಿಯೊಬ್ಬ ಮಗುವಿಗೂ ಅಗತ್ಯವಾದ ಸಮಗ್ರ ಚಿಕಿತ್ಸೆ ದೊರೆಯುವಂತೆ ಸಹಕಾರಾತ್ಮಕ ಪ್ರಯತ್ನಗಳ ಅಗತ್ಯತೆಯನ್ನು ಅವರು ಒತ್ತಿಹೇಳಿದರು.
ಡಾ. ಅವಿನಾಶ ಶೆಟ್ಟಿ ಅವರು ಮಕ್ಕಳ ಕ್ಯಾನ್ಸರ್ ರೋಗಿಗಳಿಗೆ ಅಗತ್ಯವಿರುವ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಒದಗಿಸುವ ಮೂಲಕ ಅತ್ಯುತ್ತಮ ಚಿಕಿತ್ಸೆ ನೀಡುವಲ್ಲಿ ಆಸ್ಪತ್ರೆಯ ಬದ್ಧತೆಯನ್ನು ವ್ಯಕ್ತಪಡಿಸಿದರು.
ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ಕ್ಯಾನ್ಸರ್ ವಿಭಾಗದ ಮುಖ್ಯಸ್ಥರಾದ ಡಾ. ವಾಸುದೇವ ಭಟ್ ಕೆ ಅವರು, ಬಾಲ್ಯ ಕ್ಯಾನ್ಸರ್ ಅನ್ನು ಸಮಯಕ್ಕೆ ಸರಿಯಾಗಿ ಪತ್ತೆಹಚ್ಚಿ, ಸೂಕ್ತ ತಂಡದಿಂದ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಿದರೆ ಸಂಪೂರ್ಣ ಗುಣಮುಖಗೊಳಿಸಲು ಸಾಧ್ಯವೆಂದು ತಿಳಿಸಿದರು. ಆಸ್ಪತ್ರೆಯ ಸಿಬ್ಬಂದಿಯ ಸಹಕಾರದಿಂದ ದಿನಪೂರ್ತಿ ಸಂತೋಷಭರಿತ ವಾತಾವರಣ ನಿರ್ಮಾಣಗೊಂಡು, ಕ್ಯಾನ್ಸರ್ ಪೀಡಿತ ಧೈರ್ಯಶಾಲಿ ಮಕ್ಕಳ ಹಾಗೂ ಅವರ ಕುಟುಂಬಗಳ ಮುಖದಲ್ಲಿ ನಗು ಮೂಡಿಸಲಾಯಿತು. ಅಸ್ಥಿ ಮಜ್ಜೆ ಕಸಿಯ ನಂತರ ಕ್ಯಾನ್ಸರ್ ನಿಂದ ಗುಣಮುಖರಾದ ಮಿಸ್ ಚೈತ್ರಾ ಮತ್ತು ಮಿಸ್ ಫರಹಾನಾ ಕಾರ್ಯಕ್ರಮ ನಿರೂಪಿಸಿದರು.
ಕಸ್ತೂರ್ಬಾ ಆಸ್ಪತ್ರೆಯಲ್ಲಿ ನಡೆದ ಈ ಕಾರ್ಯಕ್ರಮವು ಬಾಲ್ಯ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಮಕ್ಕಳ ಮನದಲ್ಲಿ ಸಂತೋಷವನ್ನು ಹಂಚುವ ಸಂಸ್ಥೆಯ ಅಚಲ ಬದ್ಧತೆಯ ಪ್ರತೀಕವಾಗಿದೆ. ಇದು ಈ ಯುವ ಕ್ಯಾನ್ಸರ್ ಪೀಡಿತ ಯೋಧರ ಹೋರಾಟಕ್ಕೆ ಬೆಂಬಲ ನೀಡುವ ಅಗತ್ಯತೆಯನ್ನು ಮತ್ತೊಮ್ಮೆ ಸ್ಮರಿಸುತ್ತದೆ.
