ಬಸ್ಸಿನಲ್ಲಿ ಕಳೆದುಕೊಂಡ ಚಿನ್ನದ ಸರವನ್ನು ಬಸ್ಸಿನ ಕಂಡಕ್ಟರ್ ಅದರ ವಾರಸುದಾರರಿಗೆ ನೀಡಿ ಮೆರೆದ ಪ್ರಾಮಾಣಿಕತೆಗೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾರ್ಕಳದ ವಿಶಾಲ್ ಮೋಟಾರ್ಸ್ ಬಸ್ಸಿನ ಕಂಡಕ್ಟರ್ ರಾಜೇಶ್ ಹೆಗ್ಡೆಯವರಿಗೆ ಬಸ್ಸಿನಲ್ಲಿ ಸುಮಾರು 3,00,000 ರೂಪಾಯಿ ಬೆಲೆ ಬಾಳುವ ಚಿನ್ನದ ಸರ ದೊರೆತಿತ್ತು. ಚಿನ್ನವನ್ನು ತಮ್ಮ ಬಳಿ ಸುರಕ್ಷಿತವಾಗಿ ಇರಿಸಿಕೊಂಡು, ಚಿನ್ನ ಸಿಕ್ಕಿದ ಬಗ್ಗೆ ವಾಟ್ಸಪ್ ಮೂಲಕ ಪ್ರಚಾರ ಮಾಡಿ ಅದರ ವಾರಸುದಾರರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸರವು ಕುಂದಾಪುರ ಮೂಲದ ನಿಟ್ಟೆ ಕಾಲೇಜಿನ ವಿದ್ಯಾರ್ಥಿಯಾದ ಸುದೀಕ್ಷಾ ರವರು ನಿನ್ನೆ ಬಸ್ಸಿನಲ್ಲಿ ಪ್ರಯಾಣಿಸುವಾಗ ಆಕಸ್ಮಿಕವಾಗಿ ಕಳೆದುಕೊಂಡಿದ್ದು, ಅವರು ಸೂಕ್ತದ ಮಾಹಿತಿಯನ್ನು ನೀಡಿ ಚಿನ್ನದ ಸರವನ್ನು ಮರಳಿ ಪಡೆದಿರುತ್ತಾರೆ.
