ಹೆಬ್ರಿ : ಗ್ರಾಮೀಣ ಪ್ರದೇಶ ಕುಚ್ಚೂರು ಪ್ರದೇಶದಲ್ಲಿ ಸಮಾನ ಮನಸ್ಕ ಯುವ ಸಂಘಟನೆ ಮಾಡುವ ಬಹುಸ್ಥರದ ಜನಸೇವೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತಿದೆ. ಈ ಮಹಾನ್ ಕಾರ್ಯ ನಾಡಿಗೆ ಮಾದರಿಯಾಗಿದೆ. ಶಾಂತಿನಿಕೇತನದ ಮೂಲಕ ಸರ್ವರಿಗೂ ಒಳಿತಾಗಲಿ.
ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಹುಟ್ಟಿಕೊಂಡ ಸಂಸ್ಥೆಯು ಇಂದು ವಿವಿಧ ಹಂತದ ಸೇವೆಯನ್ನು ವಿಸ್ತರಿಸುವ ಮೂಲಕ ಖ್ಯಾತಿ ಪಡೆದಿದೆ ಎಂದು ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.
ಅವರು ಹೆಬ್ರಿ ತಾಲ್ಲೂಕಿನ ಕುಚ್ಚೂರು ಕುಡಿಬೈಲು ಶಾಂತಿನಿಕೇತನ ಸಭಾಂಗಣದಲ್ಲಿ ಭಾನುವಾರ ಶಾಂತಿನಿಕೇತನ ಯುವ ವೃಂದದ ಶಾಂತಿನಿಕೇತನ ಪ್ರತಿಷ್ಠಾನ ಲೋಕಾರ್ಪಣೆ ಸಂಭ್ರಮ ಮತ್ತು ಪಿ.ಎಚ್ ಡಿ ಪಡೆದ ರಾಜೇಶ್ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ದಾನಿಗಳು ಶಿಕ್ಷಣಕ್ಕೆ ನೆರವು ನೀಡುದಿದ್ದರೆ, ಸರ್ಕಾರಿ ಶಾಲೆಗಳಿಗೆ ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ನೀಡಿ. ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಗೆ ನೆರವು ನೀಡಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ. ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕಾರ್ಯವನ್ನು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಮಾಡುತ್ತಾರೆ. ಸರ್ಟಿಫೀಕೇಟ್ ಇದ್ದರೆ ನಾವು ಪಾಸ್ ಆಗುವುದಿಲ್ಲ. ಜೀವನದಲ್ಲೂ ನಾವು ಪಾಸ್ ಆಗಬೇಕು. ಸರ್ಕಾರಿ ಶಾಲೆಯಲ್ಲಿ ಕಲಿತ ಸಾವಿರಾರು ಮಂದಿ ಉನ್ನತ ಸಾಧನೆ ಮಾಡಿ ಮಾದರಿಯಾಗಿದ್ದಾರೆ. ನಾವು ಮಕ್ಕಳಿಗೆ ಆದರ್ಶವನ್ನು ಕಲಿಸಿ ಧರ್ಮದ ದಾರಿಯಲ್ಲಿ ನಡೆಯುವಂತೆ ಪ್ರೇರಣೆ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಚ್ಚೂರು ಕುಡಿಬೈಲು ಶಾಂತಿನಿಕೇತನ ಯುವ ವೃಂದದ ಸಂಸ್ಥಾಪಕ ಪ್ರಾಧ್ಯಾಪಕರಾದ ರಾಜೇಶ್ ಕುಡಿಬೈಲ್ ನಮ್ಮೂರಿನ ಸಮಾನ ಮನಸ್ಕರ ಜನಸಾಮಾನ್ಯರ ಸಂಘಟನೆ ಇಂದು ಜನಸೇವೆಯ ಮೂಲಕ ಎತ್ತರಕ್ಕೆ ಬೆಳೆದಿದೆ. ಉನ್ನತ ಸಾಧನೆಯನ್ನು ಮಾಡುವಂತಾಗಿದೆ. ನಮ್ಮ ಸೇವೆ ಸರ್ವರ ಬೆಂಬಲ ಲಭಿಸಿದ ಕಾರಣ ಮತ್ತಷ್ಟು ಸೇವೆ ಮಾಡಲು ಪ್ರೇರಣೆ ದೊರೆತಿದೆ. ಇನ್ನು ಹಲವಾರು ಕನಸುಗಳನ್ನು ಸಂಸ್ಥೆಯು ಕಂಡಿದ್ದು ಅದಕ್ಕಾಗಿ ಪ್ರತಿಷ್ಠಾನವನ್ನು ಸ್ಥಾಪಿಸಲಾಗಿದೆ, ಶಿಕ್ಷಣ, ಆರೋಗ್ಯ, ಪರಿಸರ, ಮಹಿಳಾ ಸಬಲೀಕರಣ, ಯುವಜನರ ಅಭಿವೃದ್ಧಿ ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣ ಸೇವೆ ಸಲ್ಲಿಸುವ ಸಂಕಲ್ಪ ನಮ್ಮದಾಗಿದೆ. ಈ ಪವಿತ್ರ ಕಾರ್ಯಕ್ಕೆ ಎಲ್ಲರ ಬೆಂಬಲ ನಮ್ಮ ಸಂಸ್ಥೆಗೆ ದೊಡ್ಡ ಶಕ್ತಿಯಾಗಲಿದೆ. “ಸಮಾಜದ ಒಳಿತಿಗಾಗಿ ಕೈಜೋಡಿಸುವ ಪ್ರತಿಯೊಬ್ಬರೂ ನಮ್ಮ ಕುಟುಂಬದ ಸದಸ್ಯರು” ಎಂಬ ನಂಬಿಕೆಯಿಂದ ನಿರಂತರವಾಗಿ ಜನಸೇವೆಯಲ್ಲಿ ಎಲ್ಲರೂ ಸಕ್ರೀಯರಾಗಿದ್ದೇವೆ ಎಂದರು.
ಉದ್ಯಮಿ ವಂಡಾರು ಶ್ರೀಕೃಷ್ಣ ಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಮುಖ್ಯಸ್ಥ ಸಂಪತ್ ಕುಮಾರ್ ಶೆಟ್ಟಿ ಅವರಿಗೆ ಶಾಂತಿನಿಕೇತನ ಗೌರವ 2026, ಡಾ. ವಾಸುದೇವ್ ಅವರಿಗೆ ಶಾಂತಿನಿಕೇತನ ಸಾಧಕ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ವಿದ್ಯಾ ಪೋಷಕ್ ವಿಧ್ಯಾರ್ಥಿ ವೇತನ ವಿತರಣೆ ಮತ್ತು ಹಲವು ಸಾಧಕರನ್ನು ಸನ್ಮಾನಿಸಲಾಯಿತು.
ಬಹುಮುಖ ಪ್ರತಿಭೆ ಶಾಂತಿನಿಕೇತನ ಜನಸೇವಾ ಸಂಸ್ಥೆಗಳ ಸಂಸ್ಥಾಪಕರಾದ ತುಮಕೂರು ವಿವಿ ಕಲಾ ಕಾಲೇಜಿನ ಪ್ರಾಧ್ಯಾಪಕರಾದ ಪಿ.ಎಚ್ ಡಿ ಪಡೆದ ರಾಜೇಶ್ ಕುಡಿಬೈಲ್ ಅವರನ್ನು ವಿಶೇಷ ಸಾಧನೆಗಾಗಿ ಸನ್ಮಾನಿಸಲಾಯಿತು.
ತುಮಕೂರು ವಿವಿ ಕಲಾ ಕಾಲೇಜು ನಿಕಟಪೂರ್ವ ಪ್ರಾಂಶುಪಾಲ ಪ್ರೊ. ಬಿ ಕರಿಯಣ್ಣ, ಉದ್ಯಮಿಗಳಾದ ಹೆಬ್ರಿ ಮೂಡಲುಮನೆ ಕರುಣಾಕರ ಹೆಗ್ಡೆ ಬೆಂಗಳೂರು, ವಂಡಾರು ಸಂಪತ್ ಕುಮಾರ್ ಶೆಟ್ಟಿ, ಹೆಬ್ರಿ ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ. ಭಾರ್ಗವಿ ಆರ್ ಐತಾಳ್, ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯ ಜನಜಾಗೃತಿ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಹೆಬ್ರಿ ಚೈತನ್ಯ ಯುವ ವೃಂದದ ಎಚ್. ಜನಾರ್ಧನ್, ಉದ್ಯಮಿ ಕುಚ್ಚೂರಿನ ಕಿರಣ್ ತೋಳಾರ್, ಹೆಬ್ರಿ ಪ್ರವೀಣ್ ಬಲ್ಲಾಳ್, ಗುಜರಾತ್ ಉಧ್ಯಮಿ ಬಾದ್ಲು ಹರೀಶ ಶೆಟ್ಟಿ, ವಕೀಲ ರತನ್ ಕುಮಾರ್ , ಲ್ಯಾಂಪ್ಸ್ ಸಹಕಾರ ಮಹಾಮಂಡಳದ ನಿರ್ದೇಶಕ ರಾಘವ ನಾಯ್ಕ್ ಮುದ್ರಾಡಿ, ತುಮಕೂರು ಆಕ್ಸಿಸ್ ಮ್ಯಾಕ್ಸ್ ಲೈಫ್ ಶಾಖಾ ವ್ಯವಸ್ಥಾಪಕ ಮಂಜುನಾಥ ಕೆಆರ್, ಸಮಾಜ ಸೇವಕರಾದ ಕುಚ್ಚೂರು ಶ್ರೀಕಾಂತ್ ಪೂಜಾರಿ, ಬೇಳಂಜೆ ಅಮೃತ್ ಕುಮಾರ್ ಶೆಟ್ಟಿ, ಮಹೇಶ ಶೆಟ್ಟಿ ಬಾದ್ಲು, ಶಾಂತಿನಿಕೇತನ ಯುವ ವೃಂದದ ಅಧ್ಯಕ್ಷ ಮಹೇಶ್, ಸಹಕಾರ ಸಂಘದ ಉಪಾಧ್ಯಕ್ಷ ದೀಕ್ಷಿತ್ ನಾಯಕ್, ಶಾಂತಿನಿಕೇತನ ಸಂಸ್ಥೆಗಳ ನಿರ್ದೆಶಕರು, ಪದಾಧಿಕಾರಿಗಳು, ಸ್ಥಳೀಯ ಪ್ರಮುಖರು, ಗಣ್ಯರು ಉಪಸ್ಥಿತರಿದ್ದರು. ನಿರ್ದೇಶಕ ಶ್ರೀನಿವಾಸ ಶೆಟ್ಟಿ ಸನ್ಮಾನಪತ್ರ ವಾಚಿಸಿದರು. ವಿಷ್ಣುಧರನ್ ನಿರೂಪಿಸಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ನರೇಂದ್ರ ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
