ಕಾರ್ಕಳ: ರಾಷ್ಟ್ರೀಕೃತ ಬ್ಯಾಂಕ್ಗಳಿಗಿಂತಲೂ ಮಿಗಿಲಾಗಿ ಅತ್ಯಂತ ಸುಸಜ್ಜಿತ ಕಾರ್ಯಪ್ರವೃತ್ತಿಯ ಮೂಲಕ ಜನರ ಮೆಚ್ಚುಗೆ ಗಳಿಸಿ, ಗ್ರಾಹಕರಿಗೆ ಉತ್ಕೃಷ್ಟ ಹಣಕಾಸು ಸೇವೆ ನೀಡುತ್ತಿರುವ ಆಶಯ ಸಹಕಾರಿ ಸಂಸ್ಥೆಯ ಸಾಧನೆ ಶ್ಲಾಘನೀಯ. ಪರಸ್ಪರ ನಂಬಿಕೆ ಮತ್ತು ಪ್ರೀತಿಯೇ ಇಂತಹ ಬ್ಯಾಂಕಿಂಗ್ ವ್ಯವಹಾರಕ್ಕೆ ಭದ್ರ ಬುನಾದಿ ಎಂದು ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಕೋಟ್ಯಾನ್ ಹೇಳಿದರು.

ಅವರು ಮೇ. 22ರಂದು ಕಾರ್ಕಳ ಮಾರಿಯಮ್ಮ ದೇವಸ್ಥಾನದ ಸಮೀಪದ ಪ್ರೈಮ್ ಸಿಟಿ ಸೆಂಟರ್ನ 2ನೇ ಮಹಡಿಯ “ಶ್ರೀ ವಿಜಯ” ಆವರಣದಲ್ಲಿ ಆಯೋಜಿಸಲಾಗಿದ್ದ ಆಶಯ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘದ ನೂತನ ಸ್ವಂತ ಕಚೇರಿಯ ಉದ್ಘಾಟನೆ ಹಾಗೂ ಹಿತೈಷಿಗಳು ಮತ್ತು ಗ್ರಾಹಕರ ಸಮ್ಮಿಲನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಎಂ.ಕೆ. ಸುವ್ರತ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಾಜದೊಂದಿಗೆ ಬೆರೆಯಬೇಕು ಎಂಬ ಉದಾತ್ತ ಉದ್ದೇಶದಿಂದ ಕೆಲವು ಸದಸ್ಯರೊಂದಿಗೆ ಆರಂಭಗೊಂಡ ಈ ಸಂಸ್ಥೆ ಇಂದು 3000ಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ಕೇವಲ 1 ಕೋಟಿ ರೂ. ವ್ಯವಹಾರದಿಂದ ಆರಂಭವಾಗಿ, ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ನಿರಂತರ ಶ್ರಮದಿಂದ ಇಂದು 300 ಕೋಟಿ ರೂ. ವಹಿವಾಟಿನ ಮೈಲಿಗಲ್ಲು ತಲುಪಿದೆ. 2022ರಲ್ಲಿ 40 ಕೋಟಿ ರೂ. ಇದ್ದ ವ್ಯವಹಾರವನ್ನು ಸದಸ್ಯರ ಬೆಂಬಲದಿಂದ ನೂರು ಕೋಟಿ ರೂ.ಗೆ ಏರಿಸುವ ಗುರಿ ಇತ್ತಾದರೂ, ಇಂದು 300 ಕೋಟಿ ರೂ. ತಲುಪಿರುವುದು ಹೆಮ್ಮೆಯ ವಿಷಯ ಎಂದರು.
ನಮ್ಮ ಸಿಬ್ಬಂದಿ ಶೇ.100ರಷ್ಟು ಸಾಲ ಮರುಪಾವತಿ ಸಾಧಿಸಿದ್ದಾರೆ. ಸಹಕಾರಿ ತತ್ವದಡಿ ಗ್ರಾಹಕರಿಗೆ ಆಧುನಿಕ ಕೋರ್ ಬ್ಯಾಂಕಿಂಗ್ ಹಾಗೂ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯ ಒದಗಿಸುವುದೇ ನಮ್ಮ ಆಡಳಿತ ಮಂಡಳಿಯ ಮುಖ್ಯ ಆಶಯ ಎಂದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಧಾಕರ್ ಶೆಟ್ಟಿ ಮಾತನಾಡಿ ಆಶಯ ಸೊಸೈಟಿಯು ಎಲ್ಲರ ಆಶಯಗಳನ್ನು ಈಡೇರಿಸುವ ಸಂಸ್ಥೆಯಾಗಿದೆ ಎಂದರು.
ಉದ್ಯಮಿ ಬೋಳ ಶ್ರೀನಿವಾಸ್ ಕಾಮತ್ ಮಾತನಾಡಿ ಸಹಕಾರಿ ಸಂಘವು ಉತ್ತಮ ವ್ಯವಹಾರದ ಮೂಲಕ ಜನರ ಪ್ರೀತಿಯ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದರು.
ಸಂಸ್ಥೆಯ ಉಪಾಧ್ಯಕ್ಷ ರೋಬರ್ಟ್ ರೊನಾಲ್ಡ್ ಫೆರ್ನಾಂಡಿಸ್, ವೀಣಾ ಡಿಸೋಜಾ ದಂಪತಿ, ನಿರ್ದೇಶಕ ಮಂಡಳಿಯ ಸದಸ್ಯರು, ಗೌರವ ಸಲಹಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ನಿರ್ದೇಶಕ ಮೋಹನ್ ಪಡಿವಾಳ್ ಸ್ವಾಗತಿಸಿದರು. ಆರ್.ಜೆ. ಪ್ರಸನ್ನ ನಿರೂಪಿಸಿ, ವಂದಿಸಿದರು. ಶಾಸಕ ಗುರುರಾಜ್ ಗಂಟಿಹೊಳೆ ಗಣ್ಯರು ಭಾಗವಹಿಸಿದರು.
