ಬೆಳ್ಮಣ್:- ದೇವರು ನಮ್ಮನ್ನು ಕಾಪಾಡುವನು ಎಂಬ ಬಲವಾದ ನಂಬಿಕೆ ಮತ್ತು ಶಾಲಾ ಶಿಕ್ಷಕರ ಮೇಲಿರುವ ಭರವಸೆಯಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಶಾಲೆಯಲ್ಲಿ ಒಳ್ಳೆಯ ಸಂಸ್ಕಾರವಂತ, ಬದುಕಿಗೆ ಬೇಕಾಗಿರುವ ಮೌಲ್ಯಾಧಾರಿತ ಶಿಕ್ಷಣ ಶಾಲೆಗಳಲ್ಲಿ ಮಾತ್ರ ಸಿಗುತ್ತದೆ. ಶತಮಾನೋತ್ತರ ಇತಿಹಾಸ ಇರುವ ಈ ಕನ್ನಡ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಆಂಗ್ಲ ಶಿಕ್ಷಣವನ್ನೂ ಕಲಿಸುವ ಕಾರ್ಯಕ್ಕೆ ಕೈ ಹಾಕಿರುವ ಇಲ್ಲಿನ ಸಂಸ್ಥೆಯ ಸಾಧನೆ ನಿಜಕ್ಕೂ ಶ್ಲಾಘನೀಯ ಎಂದು ನಂದಳಿಕೆ ಚಾವಡಿ ಅರಮನೆ ಸುಹಾಸ್ ಹೆಗ್ಡೆ ನುಡಿದರು.
ಅವರು ನಂದಳಿಕೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ಪ್ರಾರಂಭೋತ್ಸವ ಮತ್ತು ಎಲ್ಕೆಜಿ-ಯುಕೆಜಿ ತರಗತಿಗಳ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ನೆರವೇರಿಸಿ ಮಾತನಾಡಿದರು.
ಖಾದಿ ಮತ್ತು ಗ್ರಾಮೋದ್ಯೋಗ ಮಜಿ ಅಧ್ಯಕ್ಷ ಮಿಥುನ್ ಹೆಗ್ಡೆ ಪಡುಬಿದ್ರಿ ಮಾತನಾಡಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆ ಎಂಬ ಕೀಳರಿಮೆ ಬೇಡ. ಇದೇ ಶಾಲೆಯಲ್ಲಿ ಕಲಿತವರು ಇಂದು ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ. ಅದೆಷ್ಟೋ ಸಾಧಕರೂ ಆಗಿದ್ದಾರೆ. ಶಿಕ್ಷಣವನ್ನು ಕಲಿಸುವುದರ ಹಿಂದೆ ಶಿಕ್ಷಕರ ಪರಿಶ್ರಮವಿದ್ದರೆ ಸಾಲದು. ಪೋಷಕರ ಸಹಕಾರವೂ ಅತೀ ಮುಖ್ಯವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕ್ಷೇತ್ರ ಸಂಪನ್ಮೂಲ ಕೇಂದ್ರ ಕಾರ್ಕಳದ ಸಮನ್ವಯ ಅಧಿಕಾರಿ ಇಂದಿರಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲ ಡಾ.ಜನಾರ್ದನ ಭಟ್, ನಿವೃತ್ತ ಶಿಕ್ಷಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ, ನಿವೃತ್ತ ಸಂಪನ್ಮೂಲ ವ್ಯಕ್ತಿ ಸಂಜೀವ ದೇವಾಡಿಗ ಸಕಾಲಿಕವಾಗಿ ಮಾತನಾಡಿದರು. ಹಳೆವಿದ್ಯಾರ್ಥಿ ಸಂಘದ ಗೌರವ ಅಧ್ಯಕ್ಷ ಬಾಲಚಂದ್ರ ಶೆಟ್ಟಿ, ಎಸ್ಡಿಎಮ್ಸಿ ಅಧ್ಯಕ್ಷೆ ಮಮತಾ ವೇದಿಕೆಯಲ್ಲಿದ್ದರು.
ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಭಾಸ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಜೆಸಿಂತಾ ನ್ಯಾನ್ಸಿ ಅಗೇರ ಸ್ವಾಗತಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಸದಾನಂದ ಶೆಟ್ಟಿ ನಿರೂಪಿಸಿದರು. ಶಿಕ್ಷಕ ಚಂದ್ರಕಾಂತ ಡೇಸ ಧನ್ಯವಾದವಿತ್ತರು.
