ಗಣಿತನಗರ: ಪ್ರತಿದಿನ ನಿಮಗೊಂದು ಹೊಸ ಅವಕಾಶ ಸಿಗುತ್ತದೆ. ಆ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಿ. ಕಷ್ಟಗಳು ನಮ್ಮನ್ನು ಬೆಳೆಸಿದಷ್ಟು, ಸುಖ ನಮ್ಮನ್ನು ಬೆಳೆಸುವುದಿಲ್ಲ. ನಮ್ಮ ಭಾವನೆಗಳನ್ನು ಹಂಚಿಕೊಳ್ಳಬೇಕು. ನಮ್ಮ ಬದುಕಿನ ಮಹಾದುದ್ದೇಶ ಎದುರಿಗೆ ಇದ್ದಾಗ ನಮಗೆ ಎದುರಾಗುವ ಸಮಸ್ಯೆಗಳು ನಗಣ್ಯ. ನಾವು ಕಲಿತಂತ ವಿದ್ಯೆ ಮನುಕುಲದ ಒಳಿತಿಗಾಗಿ ಬಳಕೆಯಾಗಬೇಕು. ನಾವು ನಮ್ಮ ಊರಿಗೆ ಒಳ್ಳೆಯ ಕೊಡುಗೆ ಆಗಬೇಕು. ನಾವು ನಿನ್ನೆ ಮತ್ತು ನಾಳೆಯ ಬಗ್ಗೆ ಹೆಚ್ಚೆಚ್ಚು ಯೋಚನೆಮಾಡಿ ತೊಂದರೆಗೊಳಗಾಗುತ್ತಿದ್ದೇವೆ. ಇವತ್ತಿನ ದಿನ ನಿಮ್ಮ ಕೈಯಲ್ಲಿದೆ ಎಂದು ಉಡುಪಿಯ ಮನಃಶಾಸ್ತ್ರಜ್ಞರು ಹಾಗೂ ಲೇಖಕರಾದಂತಹ ಡಾ. ವಿರೂಪಾಕ್ಷ ದೇವರಮನೆ ನುಡಿದರು.
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಸಹಯೋಗದಲ್ಲಿ ನಡೆಯುತ್ತಿರುವ ಮೌಲ್ಯಸುಧಾ ಮಾಲಿಕೆ-49ರಲ್ಲಿ“ಈ ದಿನ ನಿನದೇ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ, ಟ್ರಸ್ಟಿಗಳಾದ ಅನಿಲ್ ಕುಮಾರ್ ಜೈನ್, ಸಿ.ಎ ನಿತ್ಯಾನಂದ ಪ್ರಭು, ಸಿ.ಇ.ಒ ಹಾಗೂ ಪ್ರಾಂಶುಪಾಲರು ದಿನೇಶ್ ಎಂ ಕೊಡವೂರು, ಉಪಪ್ರಾಂಶುಪಾಲರಾದ ಸಾಹಿತ್ಯ ಹಾಗೂ ಕೌನ್ಸಿಲರ್ ಡಾ. ಪ್ರಸನ್ನ ಹೆಗ್ಡೆ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಉಪನ್ಯಾಸಕರುಗಳಾದ ಸಂತೋಷ್ ನೆಲ್ಲಿಕಾರು ಪ್ರಾರ್ಥಿಸಿ, ವಿನಯ ಚಂದ್ರ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
