ನಮ್ಮ ಪೋಷಕರ ಸಹಕಾರ ಬೆಂಬಲದಿಂದ ಈ ಶಿಕ್ಷಣ ಸಂಸ್ಥೆ 27 ವರ್ಷಗಳನ್ನು ಪೂರೈಸಿದೆ. ಎಲ್ಲಾ ಪೋಷಕರಿಗೂ ನಾನು ಋಣಿಯಾಗಿದ್ದೇನೆ. ಮಕ್ಕಳ ಬಾಲ್ಯದ ಆರಂಭಿಕ ಶಿಕ್ಷಣವು ಯೋಗ್ಯ ಗುಣಮಟ್ಟದ ಶಿಕ್ಷಣ ದೊರೆತಲ್ಲಿ ಅವರ ಉನ್ನತ ಶಿಕ್ಷಣಕ್ಕೆ ಅದೇ ಬುನಾದಿಯಾಗುತ್ತದೆ. ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಅತ್ಯಾಧುನಿಕ ರೀತಿಯ ಕ್ರೀಡಾ ಸೌಕರ್ಯದ ವ್ಯವಸ್ಥೆ ನಮ್ಮ ಸಂಸ್ಥೆಯಲ್ಲಿ ದೊರೆಯುವಂತಾಗುತ್ತದೆ. ಬಾಲ್ಯದಲ್ಲಿಯೇ ಮಕ್ಕಳು ಸ್ವಚ್ಛತೆ ಮತ್ತು ಆರೋಗ್ಯದ ಕುರಿತು ಜಾಗೃತಿ ವಹಿಸಬೇಕು. ಇದು ಪ್ರತಿಯೊಬ್ಬ ಪೋಷಕರ ಆದ್ಯ ಕರ್ತವ್ಯ. ಈ ದಿಸೆಯಲ್ಲಿ ನಮ್ಮ ಶಿಕ್ಷಣ ಸಂಸ್ಥೆಯು ಅತ್ಯಾಧುನಿಕ ಸೌಕರ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ಎಂದು ಎಸ್. ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಚ್ ನಾಗರಾಜ್ ಶೆಟ್ಟಿ ಅವರು ಹೇಳಿದರು.
ಇವರು, ಎಸ್.ಆರ್ ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ ನರ್ಸರಿ, ಎಲ್.ಕೆ.ಜಿ ಮತ್ತು ಯು.ಕೆ.ಜಿ ಮಕ್ಕಳ ತರಗತಿ ಆರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಪ್ನಾ ಎನ್ ಶೆಟ್ಟಿ ಅವರು ಮಾತನಾಡಿ, ಮಕ್ಕಳೊಂದಿಗೆ ಯಾವಾಗಲೂ ಧನಾತ್ಮಕವಾಗಿ ಮಾತನಾಡಬೇಕು. ಮಕ್ಕಳನ್ನು ಸ್ವತಂತ್ರವಾಗಿ ಬೆಳೆಯಲು ಪೋಷಕರು ಪ್ರೋತ್ಸಾಹಿಸಬೇಕು. ಮಕ್ಕಳ ಮನಸ್ಸು ಅರಳುವ ಸಮಯದಲ್ಲಿ ಪೋಷಕರಾದ ನಾವು ಮಕ್ಕಳ ಮನಸ್ಸಿನ ಮೇಲೆ ನಿಯಂತ್ರಣ ಹೇರಬಾರದು. ಮಕ್ಕಳಿಂದ ಸಾಧ್ಯವಾಗುವ ಸಣ್ಣ ಸಣ್ಣ ಕೆಲಸವನ್ನು ಮಕ್ಕಳಿಂದಲೇ ಮಾಡಿಸಿ ಅವರು ಸ್ವತಂತ್ರವಾಗಿ ಬದುಕಲು ಬಾಲ್ಯದಿಂದಲೇ ಅಭ್ಯಾಸ ಮಾಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್.ಆರ್. ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲರಾದ ಭಗವತಿ, ಉಪ ಪ್ರಾಂಶುಪಾಲರಾದ ದೀಪಕ್ ಎನ್, ಕೋಓರ್ಡಿನೇಟರ್ ಸುಜಾತ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ೧ನೇ ತರಗತಿಯ ವಿದ್ಯಾರ್ಥಿನಿ ಜಾನ್ವಿ ಶಾರದೆಯ ವೇಷಭೂಷಣದಲ್ಲಿ ಗಮನಸೆಳೆದಳು.
ಕಾರ್ಯಕ್ರಮವನ್ನು ನಾಲ್ಕನೇ ತರಗತಿ ವಿದ್ಯಾರ್ಥಿನಿ ಪ್ರಿಶಾ ನಿರೂಪಿಸಿ, ೩ನೇ ತರಗತಿಯ ವಿದ್ಯಾರ್ಥಿ ಸಂವೇದ್ ಭಟ್ ಸ್ವಾಗತಿಸಿ, ೩ನೇ ತರಗತಿಯ ವಿರಾಜ್ ಪೈ ವಂದಿಸಿದರು.
