ದರೆಗುಡ್ಡೆ: ಶಾಲೆಗೆ ಹೋಗಿ ಪಾಠ ಕಲಿಯುವ ಮಕ್ಕಳು ತಾವು ವಿದ್ಯಾವಂತರು ಮತ್ತು ಬುದ್ಧಿವಂತರಾಗಬೇಕೆಂಬ ಎರಡೇ ಉದ್ದೇಶವನ್ನು ಇಟ್ಚುಕೊಂಡು ವಿದ್ಯಾರ್ಜನೆಯಲ್ಲಿ ಹಠ ಸಾಧಿಸುವವರಾಗಬೇಕು ಹೊರತು ಕನ್ನಡ ಮಾಧ್ಯಮ ,ಸರಕಾರಿ ಶಾಲೆ ಎನ್ನುವ ಕೀಳರಿಮೆ ಇರಕೂಡದು ಎಂದು ಮೂಡುಬಿದಿರೆ ಬಾರ್ ಅಸೋಸಿಯೇಶನ್ ಅಧ್ಯಕ್ಷ, ಖ್ಯಾತ ನ್ಯಾಯವಾದಿಯಾಗಿರುವ ಶರತ್ ಶೆಟ್ಚಿಯವರು ಕಿವಿಮಾತು ಹೇಳಿದರು.

ಕರಾವಳಿ ಕೇಸರಿ ಸೇವಾ ಟ್ರಸ್ಟಿನ ಬೆದ್ರ ಕರಾವಳಿ ಕೇಸರಿ ಮಹಿಳಾಘಟಕದ ಆಶ್ರಯದಲ್ಲಿ ದರೆಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇತ್ತೀಚಿನ ವರ್ಷದಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಹಬ್ಬಿಸುವ ಕೆಟ್ಟ ಅಪಪ್ರಚಾರಗಳು ಗ್ರಾಮೀಣ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕಳವಳ ಮೂಡುವುದಕ್ಕೆ ಕಾರಣವಾಗಿದೆ. ಸಾಧಿಸುವ ಛಲವೊಂದಿದ್ದರೆ ಅದಕ್ಕೆ ಭಾಷಾ ಮಾಧ್ಯಮದ ಅಡ್ಡಿಯಾಗುವುದಿಲ್ಲ. ಮುಂದಿನ ತರಗತಿಗಳಲ್ಲಿ ಇಂಗ್ಲೀಷ್ ಕಲಿಯುವುದಕ್ಕಿದೆ ಎಂಬ ಆಶಾವಾದದಲ್ಲಿ ಮಕ್ಕಳು ಶಾಲೆಯಲ್ಲಿ ಕಲಿಯುತ್ತ ಬೆಳೆಯಬೇಕು ಎಂದು ನ್ಯಾಯವಾದಿ ಶರತ್ ಶೆಟ್ಟಿ ಹೇಳಿದರು.
ಈ ಸಂದರ್ಭದಲ್ಲಿ ಟ್ರಸ್ಟಿನ ಸ್ಥಾಪಕ ಅಧ್ಯಕ್ಷರಾದ ಸಮಿತ್ ರಾಜ್ ಧರೆಗುಡ್ಡೆ, ಗೌರವಾಧ್ಯಕ್ಷರಾದ ಅಶೋಕ್ ಶೆಟ್ಟಿ ಬೇಲೊಟ್ಟು ವಿದ್ಯಾರ್ಥಿ ಪೋಷಕರ ಸಂಘದ ಅಧ್ಯಕ್ಷರಾದ ಗೀತಾ ಹಾಗೂ ಕರಾವಳಿ ಕೇಸರಿ ಘಟಕದ ಸದಸ್ಯರು ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಕರಾವಳಿ ಕೇಸರಿ ಸೇವಾ ಟ್ರಸ್ಟ್ ವತಿಯಿಂದ ನ್ಯಾಯವಾದಿ ಶರತ್ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಾಲಾ ಶಿಕ್ಷಕಿ ಅಕ್ಷತಾ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು. ಜಯಶ್ರೀ ರಾಮನಾಯಕ್ ಧನ್ಯವಾದ ಅರ್ಪಿಸಿದರು.
