ಮೂಡಬಿದಿರೆ: ವಿದ್ಯಾರ್ಥಿಗಳಲ್ಲಿ ಸೃಜನಶೀಲ ಚಿಂತನೆ, ಏಕಾಗ್ರತೆ, ಸ್ಮರಣಶಕ್ತಿ ಹಾಗೂ ಆತ್ಮವಿಶ್ವಾಸವನ್ನು ವೃದ್ಧಿಸುವ ಉದ್ದೇಶದಿಂದ ಮೂಡಬಿದಿರೆಯ ಕಲ್ಲಬೆಟ್ಟು ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಖ್ಯಾತ ತರಬೇತುದಾರ ಡಾ. ಸರ್ಫರಾಜ್ ಹಾಸಿಮ್ ಅವರಿಂದ ‘ಮೈಂಡ್ಮ್ಯಾಪಿಂಗ್’ ಕುರಿತು ವಿಶೇಷ ತರಬೇತಿ ಕಾರ್ಯಕ್ರಮ ನಡೆಯಿತು.

ತರಬೇತಿಯ ಸಂದರ್ಭದಲ್ಲಿ ಡಾ. ಸರ್ಫರಾಜ್ ಹಾಸಿಮ್ ಅವರು ವಿದ್ಯಾರ್ಥಿಗಳ ಯೋಚನಾ ವಿಧಾನವನ್ನು ವ್ಯವಸ್ಥಿತಗೊಳಿಸುವ ಕಲೆ, ಕಲಿಕೆಯ ಪರಿಣಾಮಕಾರಿ ಕಾರ್ಯ ತಂತ್ರಗಳು, ಸ್ಮರಣ ಶಕ್ತಿಯನ್ನು ವೃದ್ಧಿಸುವ ವೈಜ್ಞಾನಿಕ ವಿಧಾನಗಳು, ಸೃಜನಶೀಲ ಚಿಂತನೆಯ ಬೆಳವಣಿಗೆ ಹಾಗೂ ತಮ್ಮನ್ನು ತಾವು ಅರಿತುಕೊಳ್ಳುವ ಆತ್ಮಾವಲೋಕನದ ಮಹತ್ವ ಕುರಿತು ಸಂವಾದಾತ್ಮಕವಾಗಿ ವಿವರಿಸಿದರು. ವಿವಿಧ ಪ್ರಾಯೋಗಿಕ ಚಟುವಟಿಕೆಗಳ ಮೂಲಕ ವಿಷಯವನ್ನು ಮನಮುಟ್ಟುವಂತೆ ನಿರೂಪಿಸಿದ ಅವರು, ಪ್ರತಿಯೊಬ್ಬವಿದ್ಯಾರ್ಥಿಯೊಳಗೂ ಅಡಗಿರುವ ಸಾಮರ್ಥ್ಯವನ್ನು ಗುರುತಿಸಿ ಅದನ್ನು ಗುರಿಮುಖಿಯಾಗಿ ರೂಪಿಸಿಕೊಳ್ಳುವ ಕೌಶಲ್ಯವೇ ಯಶಸ್ಸಿನ ಮೂಲ ಮಂತ್ರ ಎಂದು ತಿಳಿಸಿದರು. ತರಬೇತಿಯುದ್ದಕ್ಕೂ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು, ವಿವಿಧ ಚಿಂತನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.
ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಶಿಕ್ಷಣವು ಕೇವಲ ಪರೀಕ್ಷಾ ಫಲಿತಾಂಶಗಳಿಗೆ ಸೀಮಿತವಾಗಿರದೆ, ವಿದ್ಯಾರ್ಥಿಯ ಚಿಂತನಾ ಸಾಮರ್ಥ್ಯ, ಸಮಸ್ಯೆ ಪರಿಹರಿಸುವ ಕೌಶಲ್ಯ ಹಾಗೂ ವ್ಯಕ್ತಿತ್ವ ವಿಕಾಸವನ್ನು ಬೆಳೆಸುವತ್ತ ಸಾಗಬೇಕು. ಮೈಂಡ್ಮ್ಯಾಪಿಂಗ್ ಅಂತಹ ತರಬೇತಿಗಳು ವಿದ್ಯಾರ್ಥಿಗಳೊಳಗಿನ ಸುಪ್ತ ಪ್ರತಿಭೆಯನ್ನು ಜಾಗೃತಗೊಳಿಸಿ, ಅವರ ಭವಿಷ್ಯವನ್ನು ಆತ್ಮವಿಶ್ವಾಸದಿಂದ ರೂಪಿಸಿಕೊಳ್ಳಲು ಪ್ರೇರಣೆಯಾಗುತ್ತವೆ. ಇಂತಹ ಜೀವನಮುಖಿ ಕಾರ್ಯಕ್ರಮಗಳನ್ನು ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ನಿರಂತರವಾಗಿ ಆಯೋಜಿಸುತ್ತಿದೆ ಎಂದು ಹೇಳಿದರು.
ಸಮಾರೋಪ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಸಂಪನ್ಮೂಲ ವ್ಯಕ್ತಿಗಳನ್ನು ಗಿಡ ನೀಡಿ ಗೌರವಿಸಿದರು.
ಪ್ರಾಂಶುಪಾಲ ಪುಷ್ಪರಾಜ್ ಸ್ವಾಗತಿಸಿದರು. ಉಪ ಪ್ರಾಂಶುಪಾಲರಾದ ತೇಜಸ್ವಿ ಭಟ್ ಹಾಗೂ ಸುನಾದ್ ರಾಜ್ ಜೈನ್ ಉಪಸ್ಥಿತರಿದ್ದರು. ಉಪನ್ಯಾಸಕಿ ವಿಲ್ಮಾ ಕಾರ್ಯಕ್ರಮವನ್ನು ನಿರೂಪಿಸಿದರು.
