ಮೂಡುಬಿದಿರೆ: ಸರಕಾರ ಮಾಡುವ ಕೆಲಸವನ್ನು ರೋಟರಿ ಕ್ಲಬ್ ಮಾಡುತ್ತಿದೆ. ಸಮಾಜ ಸೇವೆ, ಆರೋಗ್ಯ, ವಸತಿ, ಸ್ವಚ್ಛತೆ ವಿಷಯದಲ್ಲಿ ಜನಪರ ಕಾಳಜಿಯ ಸಮಾಜಮುಖಿ ಕೆಲಸ ಕಾರ್ಯಗಳನ್ನು ವಿಶ್ವಾದ್ಯಂತ ಕ್ಲಬ್ ಮಾಡುತಿದೆ ಎಂದು ರೋಟರಿ ಜಿಲ್ಲೆ 3181 ಮಾಜಿ ಜಿಲ್ಲಾ ಗವರ್ನರ್ ಎ. ಆರ್. ರವೀಂದ್ರ ಭಟ್ ಅಭಿಪ್ರಾಯಪಟ್ಟರು.

ಮೂಡುಬಿದಿರೆ ರೋಟರಿ ಕ್ಲಬ್ ನ 2026- 27 ನೇ ಸಾಲಿನ ಡಾ. ಆಶೀರ್ವಾದ ಎಂ.ಪಿ. ನೇತೃತ್ವದ ತಂಡದ ಪದಗ್ರಹಣ ಸಮಾರಂಭ ಮೂಡುಬಿದಿರೆಯ ನಿಶ್ಮಿತ ಟವರ್ಸ್ ಪ್ಯಾರಡೈಸ್ ಮಲ್ಟಿ ಪರ್ಪಸ್ ಹಾಲ್ ನಲ್ಲಿ ನಡೆದ ಸಂದರ್ಭ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು.
ವಿಶ್ವಾದ್ಯಂತ ಸುಮಾರು 12 ಲಕ್ಷ ಸದಸ್ಯರನ್ನು ಹೊಂದಿರುವ ಕ್ಲಬ್ ಗೆಳೆತನ ಮೂಲಕ ಸೇವಾ ಕಾರ್ಯವನ್ನು ನಡೆಸುವ ಕೈಂಕರ್ಯದಲ್ಲಿ ತೊಡಗಿಕೊಂಡಿದೆ ಎಂದು ಹೇಳಿದರು. ಕ್ಲಬ್ ನ ಮೂಲಕ ಸಂಪರ್ಕ ಹೆಚ್ಚುಗೊಳಿಸಿ ನಮ್ಮ ವ್ಯಕ್ತಿತ್ವವನ್ನು ಬೆಳೆಸಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು. ನೂತನ ಪದಾಧಿಕಾರಿಗಳ ಸಭೆಗೆ ಪರಿಚಯಿಸಲಾಯಿತು.
ನೂತನ ಅಧ್ಯಕ್ಷ ಡಾ. ಆಶೀರ್ವಾದ ಎಂ. ಪಿ. ಮಾತನಾಡಿ ಒಗ್ಗೂಡಿ ಸೇವೆ ಮಾಡೋಣ ಎಂಬ ಪರಿಕಲ್ಪನೆಯಡಿ ನಾವು ಕೆಲಸ ಮಾಡಲಿದ್ದೇವೆ. ರೋಟರಿ ಕ್ಲಬ್ ಪ್ರತಿಯೊಬ್ಬರಿಗೂ ಗೌರವಿಸುವ ಕ್ಲಬ್ ಆಗಲಿದೆ. ಜನರ ಜೀವನವನ್ನು ಉನ್ನತೀಕರಿಸುವ ಕಾರ್ಯದಲ್ಲಿ ತೊಡಗಿಕೊಳ್ಳಲಿದೆ ಎಂದು ಹೇಳಿದರು.
ರೋಟರಿ ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್ ಬಿ. ಶ್ರೀಕಾಂತ್ ಕಾಮತ್ ಝೋನಲ್ ಲೆಫ್ಟಿನೆಂಟ್ ಪೂರ್ಣಚಂದ್ರ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಸ್ವಚ್ಛತೆಗಾಗಿ ಪುರಸಭೆಯ ಇಂಜಿನಿಯರ್ ಶಿಲ್ಪಾರವರು ರೋಟರಿ ಕ್ಲಬ್ ಗೆ ಪ್ರಮಾಣ ಪತ್ರ ಹಸ್ತಾಂತರಿಸಿದರು. ಸಮಾಜಮುಖಿ ಸೇವೆ ಮಾಡುತ್ತಿರುವ ಮೋಹನ್ ಕುಮಾರ್, ರಮೇಶ್, ಸರಿತಾ ರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕಿಡ್ನಿ ತೊಂದರೆಯಲ್ಲಿರುವ ರಕ್ಷಾ, ಬೆನ್ನು ಮೂಲೆ ಅನಾರೋಗ್ಯ ಹೊಂದಿರುವ ದಿನೇಶ್ ರವರಿಗೆ ಆರೋಗ್ಯ ಚಿಕಿತ್ಸೆಗಾಗಿ ಸಹಾಯಧನ, ಸಚ್ಚೇರಿಪೇಟೆ ಅಂಗನವಾಡಿಗೆ ಮಿಕ್ಸಿ ಹಸ್ತಾಂತರಿಸಲಾಯಿತು.
ನಿಕಟ ಪೂರ್ವ ಅಧ್ಯಕ್ಷ ನಾಗರಾಜ್ ಹೆಗ್ಡೆ ಮಾತನಾಡಿ ತನ್ನ ಸೇವಾವಧಿಯಲ್ಲಿ ಸಹಕರಿಸಿದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ನ ಸಂಚಿಕೆ ರೋಟಾದ್ರಿಯನ್ನು ಬಿಡುಗಡೆಗೊಳಿಸಲಾಯಿತು. ಸಂಪಾದಕ ಎಸ್.ಎನ್. ಬೋರ್ಕರ್ ಸಂಚಿಕೆಯನ್ನು ಬಿಡುಗಡೆಗೊಳಿಸುವಲ್ಲಿ ಸಹಕರಿಸಿದರು. ನಿಕಟಪೂರ್ವ ಕಾರ್ಯದರ್ಶಿ ಪವನ್ ಪೈ ವರದಿ ಮಂಡಿಸಿದರು. ನೂತನ ಕಾರ್ಯದರ್ಶಿ ಪ್ರಜ್ವಲ್ ಆಚಾರ್ ಧನ್ಯವಾದವಿತ್ತರು. ಜೆ. ಜೆ. ಪಿಂಟೋ ಕಾರ್ಯಕ್ರಮ ನಿರೂಪಿಸಿದರು. ಅರವಿಂದ ಕಿಣಿ, ನಾಗರಾಜ್ ಬಿ., ಮಹಮದ್ ಆರೀಫ್, ಸುದೇಶ್ ಜೈನ್, ರೂಪೇಶ್ ಅತಿಥಿಗಳನ್ನು ಪರಿಚಯಿಸಿದರು. ಅಬ್ದುಲ್ ಗಫೂರ್, ಡಾ. ರಮೇಶ್, ಅವಿಲ್ ಡಿಸೋಜಾ ಪ್ರತಿಭಾನ್ವಿತರನ್ನು ಪರಿಚಯಿಸಿದರು.
