ಮೂಡುಬಿದಿರೆ ಸಮಾಜ ಮಂದಿರ ಸಭಾ ರಿ ಮೂಡುಬಿದಿರೆ ಇದರ ೭೭ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮೂಡುಬಿದಿರೆ ಎಂಸಿಎಸ್ ಸೊಸೈಟಿಯ ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ.ರಿಗೆ ಸಮಾಜ ಮಂದಿರ ಪುರಸ್ಕಾರ ನೀಡಿ ಗೌರವಿಸಲಾಯಿತು.

ಮುಖ್ಯಮಂತ್ರಿ ಪದಕಕ್ಕೆ ಭಾಜನರಾದ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ ಪಿ.ಜಿ. ಮತ್ತು ಮಂಗಳೂರು ವಿವಿ ಕುಲಪತಿ ಡಾ. ಪಿ.ಎಲ್. ಧರ್ಮರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಪಿ.ಎಲ್. ಧರ್ಮ ಅವರು ನವರಾತ್ರಿ ಉತ್ಸವ ನವದುರ್ಗೆಯರ ಪೂಜೆಗಾಗಿ ಮಾತ್ರ ಮೀಸಲಾಗದೆ ಸಮಾಜದಲ್ಲಿ ದೌರ್ಜನ್ಯಕ್ಕೊಳಗಾಗುವ ಮಹಿಳೆಯರ ರಕ್ಷಣೆ ಮಾಡುವಂತಾಗಬೇಕು ಎಂದು ಹೇಳಿದರು.

ಪ್ರತಿ ದಸರಾಗಳು ಮನುಷ್ಯನ ಮನದೊಳಗಿರುವ ಮಹಿಷಾಸುರನನ್ನು ಮರ್ಧಿಸಿ ಸಾಂಸ್ಕೃತಿಕ ಔನತ್ಯಕ್ಕೆ ಕಾರಣವಾಗಬೇಕು. ದಸರಾಕ್ಕೆ ಕೊನೆಯಿಲ್ಲ. ವಿಕೃತಿಯ ನಾಶವೇ ದಸರಾದ ಸಾಂಸ್ಕೃತಿಕ ಪ್ರಜ್ಞೆ. ಭಗವಂತನ ಅನುಗ್ರಹ ಇದ್ದರೆ ಸಾಧನೆ ಸಾಧ್ಯ ಎಂದು ಹೇಳಿದರು.
ಸಮಾಜ ಮಂದಿರ ಪುರಸ್ಕಾರ ಪಡೆದ ಚಂದ್ರಶೇಖರ ಎಂ. ಮಾತನಾಡಿ ನಾವು ಪಟ್ಟ ಜೀವನದ ಕಷ್ಟಗಳು ಮತ್ತೊಬ್ಬರ ಕಷ್ಟದ ಜೀವನಕ್ಕೆ ಪರಿಹಾರ ರೂಪಿಸುತ್ತವೆ. ಸನ್ಮಾನ ನನ್ನ ಜವಾಬ್ದಾರಿಯನ್ನು ಪದೇ ಪದೇ ನೆನಪಿಸುತ್ತಿದೆ ಎಂದು ಹೇಳಿದರು.

ಸಮಾಜ ಮಂದಿರ ಸಭಾದ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ ಸಭಾಧ್ಯಕ್ಷತೆ ವಹಿಸಿದ್ದರು.
ಸ್ತುತಿ ಪ್ರಭು ಪ್ರಾರ್ಥಿಸಿದರು. ದಸರಾ ಸಂಚಾಲಕ ಪುಂಡಿಕಾ ಗಣಪಯ್ಯ ಭಟ್ ಸ್ವಾಗತಿಸಿ, ಅತಿಥಿ ಗಣ್ಯರನ್ನು ಪರಿಚಯಿಸಿದರು. ಎಂ. ಗಣೇಶ್ ಕಾಮತ್ ಧನ್ಯವಾದವಿತ್ತರು. ಸಭಾದ ಅಧ್ಯಕ್ಷ ಕೆ. ಅಭಯಚಂದ್ರ ಜೈನ್, ಕಾರ್ಯದರ್ಶಿ ಎಂ. ಸುರೇಶ್ ಪ್ರಭು ಮತ್ತು ಆಡಳಿತ ಮಂಡಳಿ ಸದಸ್ಯರುಗಳು ಸಹಕರಿಸಿದರು.
ಸಭಾ ಕಾರ್ಯಕ್ರಮದ ನಂತರ ‘ಲೀಲಾ ಮಾನೂಷವಿಗ್ರಹ’ ಯಕ್ಷಗಾನ ಪ್ರದರ್ಶನಗೊಂಡಿತು.
