ಕಾರ್ಕಳ: ವಿಧಾನಪರಿಷತ್ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಾಜು ಪೂಜಾರಿ ಗೆಲುವು ಖಚಿತ ಎಂದು ಕಾರ್ಕಳ ಕಾಂಗ್ರೆಸ್ ಮುಖಂಡ ಡಿ.ಆರ್ ರಾಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅವರು ಅ. 19ರಂದು ಕಾರ್ಕಳದ ಹೊಟೇಲ್ ಪ್ರಕಾಶ್ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ರಾಜು ಪೂಜಾರಿಯವರು ರಾಜಕಾರಣದಲ್ಲಿ ಸುಧೀರ್ಘ ಅನುಭವ ಹೊಂದಿರುವ ರಾಜಕಾರಣಿ, ರಾಜು ಪೂಜಾರಿಯವರು ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷರಾಗಿ, ಜಿಲ್ಲಾ ಪಂಚಾಯತ್ ಸದಸ್ಯರಾಗಿ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಜನಪ್ರತಿನಿಧಿಯಾಗಿ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿಕೊಂಡು ಸ್ಥಳೀಯಾಡಳಿತಗಳ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಸುಮಾರು 6ಸಾವಿರ ಮತಗಳ ಪೈಕಿ ಸುಮಾರು 1800 ಮತಗಳು ಕಾಂಗ್ರೆಸ್ ಪಕ್ಷದ ಮತಗಳಿದ್ದು, ಮಾತ್ರವಲ್ಲದೇ ರಾಜು ಪೂಜಾರಿಯವರ ಒಳ್ಳೆಯತನ ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿತ್ವಕ್ಕೆ ಉಳಿದ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಚಲಾವಣೆಯಾಗಲಿವೆ ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಅನುದಾನದ ಕೊರತೆಯಿಂದ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲವೆಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಡಿ.ಆರ್ ರಾಜು ಅವರು, ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಯಾಪೈಸೆ ಅನುದಾನ ಬಿಡುಗಡೆ ಮಾಡದೇ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿ ಕಾಮಗಾರಿ ಮಾಡಿಸಿದ್ದಾರೆ ಆದರೆ ಕಾಮಗಾರಿಯ ಬಳಿಕ ಗುತ್ತಿದೆಗಾರರಿಗೆ ಒಂದು ಪೈಸೆ ಅನುದಾನ ಬಿಡುಗಡೆ ಮಾಡಿಲ್ಲವೆಂದು ಆರೋಪಿಸಿದರು. ಇದು ಬಿಜೆಪಿ ಸರಕಾರದ ಸಮಸ್ಯೆ, ನಮ್ಮ ಈಗಿನ ಕಾಂಗ್ರೆಸ್ ಸರಕಾರದ ಸಮಸ್ಯೆಯಲ್ಲ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಸುಭೀತ್ ಎನ್.ಆರ್., ತಾರಾನಾಥ ಕೋಟ್ಯಾನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಡಿಸೋಜ ಉಪಸ್ಥಿತರಿದ್ದರು.
ಪ್ರಭಾಕರ ಬಂಗೇರ ಧನ್ಯವಾದ ಸಲ್ಲಿಸಿದರು. ಬಿಪಿನ್ ಚಂದ್ರಪಾಲ್ ಕಾರ್ಯಕ್ರಮ ನಿರೂಪಿಸಿದರು.
