ಅಜೆಕಾರು : ಪ್ರತಿ ವೃತ್ತಿ, ಉದ್ಯಮಗಳಲ್ಲಿ ವಿನೂತನ ತಾಂತ್ರಿಕತೆಯನ್ನು ಅಳವಡಿಸಿ ಮುನ್ನಡೆದಾಗ ಯಶಸ್ಸು ದೊರೆಯುತ್ತದೆ. ಫೋಟೋಗ್ರಫಿ ಕೂಡ ನಾವಿನ್ಯತೆಯೊಂದಿಗೆ ವಿಶೇಷ ಸ್ಥಾನಮಾನಗಳನ್ನು ಪಡೆದಿದೆ. ಫೋಟೋಗ್ರಫಿ ಕೂಡ ಸುಂದರ ಕಲೆ, ಜನಜೀವನದ ಅಂಗವಾಗಿದೆ. ಫೋಟೋಗ್ರಾಫರ್ಸ್ ನೀಡುವ ಸೇವೆಯಲ್ಲಿ ವೃತ್ತಿಯು ನಿಂತಿದೆ. ನಾವು ಉದ್ಯೋಗ ಮತ್ತು ಉದ್ಯಮದಲ್ಲಿ ಒಂದು ಹಂತಕ್ಕೆ ಬಂದ ಮೇಲೆ ಹುಟ್ಟೂರಿಗೆ ನಮ್ಮಿಂದಾಗ ಸೇವೆಯನ್ನು ನೀಡಬೇಕು ಎಂದು ಉದ್ಯಮಿ ಮುನಿಯಾಲು ದಿನೇಶ ಪೈ ಹೇಳಿದರು.


ಅವರು ಅಜೆಕಾರು ಕೆಮ್ಮಂಜ ಮಲ್ಟಿ ಪರ್ಪಸ್ ಹಾಲ್ನಲ್ಲಿ ನಡೆದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ.) ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕಾರ್ಕಳ ವಲಯದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಯುವ ಮುಖಂಡ ಮುಂಬೈ ಉದ್ಯಮಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ ಪಡುಕುಡೂರು ಪಡುಪರ್ಕಳ ಹರೀಶ ಶೆಟ್ಟಿ ಮಾತನಾಡಿ ಬಡವರಿಗೆ ಮತ್ತು ಸಮಾಜಕ್ಕೆ ನಾವು ನೀಡುವ ಸೇವೆಯು ನಮ್ಮನ್ನು ಎಂದಿಗೂ ಕೈ ಬಿಡುವುದಿಲ್ಲ, ನಮ್ಮನ್ನು ಎತ್ತರಕ್ಕೆ ಬೆಳೆಸುತ್ತದೆ. ಜನಸೇವೆ ಮಾಡಿದವರು ಜೀವನದಲ್ಲಿ ಉದ್ಧಾರವಾಗುವುದು ಶತಸಿದ್ಧ ಎಂದು ಶುಭಹಾರೈಸಿದರು.
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಕಾರ್ಕಳ ವಲಯದ ನೂತನ ಅಧ್ಯಕ್ಷ ಮುನಿಯಾಲು ಪ್ರಮೋದಚಂದ್ರ ಪೈ ಮಾತನಾಡಿ ೩,೫೦೦ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿರುವ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಪ್ರತಿಷ್ಠಿತ ಬೃಹತ್ ಸಂಸ್ಥೆಯಾಗಿ ವಿಶೇಷ ಪರಂಪರೆಯನ್ನು ಹೊಂದಿದೆ. ಸಕ್ರೀಯವಾಗಿ ಜನಸೇವೆಯಲ್ಲಿ ತೊಡಗಿದೆ. ಕಾರ್ಕಳ ವಲಯದಲ್ಲಿ ಹಲವಾರು ಜನಮುಖಿ ಸೇವೆ ನೀಡುವ ಯೋಜನೆ ಯೋಚನೆ ಇದೆ, ಸಂಸ್ಥೆಯ ಮೂಲಕ ಆರೋಗ್ಯ ಶಿಬಿರಗಳು, ಕ್ಯಾಮರಾ ಕಾರ್ಯಾಗಾರಗಳು, ಸದಸ್ಯರಿಗಾಗಿ ಆರೋಗ್ಯ ಜಾಗೃತಿ ಹಾಗೂ ಕಲ್ಯಾಣ ಕಾರ್ಯಕ್ರಮಗಳು ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಘಕ್ಕೆ ಸ್ವಂತ ಕಟ್ಟಡವನ್ನು ಹೊಂದುವ ಸಂಕಲ್ಪವಿದ್ದು, ರಾಜ್ಯಮಟ್ಟದಲ್ಲಿ ಮಾದರಿ ಸಂಘವನ್ನಾಗಿ ರೂಪಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸಲಾಗುತ್ತದೆ ಎಂದು ಹೇಳಿದರು.
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಕಾರ್ಕಳ ವಲಯದ ಪೂರ್ವಾಧ್ಯಕ್ಷ ಟಿ.ವಿ. ಸುಶೀಲ್ ಕುಮಾರ್ ಮಾತನಾಡಿ ಯಶಸ್ವಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ.) ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಧ್ಯಕ್ಷ ನವೀನ್ ರೈ ಪಂಜಳ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್ ಜೈನ್ ಕಾರ್ಕಳ, ಪ್ರಮುಖರಾದ ದತ್ತಾತ್ರೇಯ ಕಾರ್ಕಳ, ನವೀನ್ ರೈ ಪಂಜಳ, ದಯಾನಂದ ಬಂಟ್ವಾಳ, ಸತೀಶ ಆಚಾರ್ಯ ವರಂಗ ಸೇರಿದಂತೆ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಇಂಡಿಯನ್ ಬುಕ್ಸ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿರುವ ಮುನಿಯಾಲಿನ ಬಾಲಪ್ರತಿಭೆ ಅಪ್ತಿ ಎಸ್. ಆಚಾರ್ಯ ಅವರಿಂದ ಜಿಮ್ನಾಸ್ಟಿಕ್ ಮಾದರಿಯ ನೃತ್ಯ ಪ್ರದರ್ಶನ ನಡೆಯಿತು. ಸಂಗೀತ ಕಲಾವಿದ ಉದಯ ಶೆಟ್ಟಿ ಮುಟ್ಲುಪಾಡಿ ಅವರಿಂದ ಗೀತಾಗಾಯನ ನಡೆಯಿತು.
ನೂತನ ಪದಾಧಿಕಾರಿಗಳಾದ ಕೋಶಾಧಿಕಾರಿ ವಿ.ಆರ್. ಸತೀಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಶೇಖರ್ ಕುಕ್ಕುಜೆ, ಉಪಾಧ್ಯಕ್ಷ ಪ್ರಕಾಶ್ ಪ್ರಭು ಮತ್ತವರ ತಂಡದವರು ಅಧಿಕಾರ ಸ್ವೀಕರಿಸಿದರು.
ಎಸ್.ಕೆ.ಪಿ.ಎ. ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಾಸುದೇವ ರಾವ್, ಯುವ ಮುಖಂಡ ಮುಂಬೈ ಉದ್ಯಮಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ ಪಡುಕುಡೂರು ಪಡುಪರ್ಕಳ ಹರೀಶ ಶೆಟ್ಟಿ, ಉದ್ಯಮಿ ಮುನಿಯಾಲು ಸುಜಯ ಶೆಟ್ಟಿ, ಉದ್ಯಮಿ ಶಂಕರ ಶೆಟ್ಟಿ ಮುನಿಯಾಲು, ಹಿರಿಯರಾದ ಶ್ರಿಧರ ಪೈ ಮುನಿಯಾಲು, ಉದ್ಯಮಿ ಶಶಿಕಾಂತ ನಾಯಕ್ ಮುನಿಯಾಲು, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ.) ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಯ್ ಕುಮಾರ್, ಕಾರ್ಕಳದ ಗೌರವಾಧ್ಯಕ್ಷ ಟಿ.ವಿ. ಸುಶೀಲ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ದತ್ತಾತ್ರೇಯ, ಪ್ರಸನ್ನ ಹೆಗ್ಡೆ, ಹಿರಿಯರಾದ ಗೋಪಾಲ್ ಸುಳ್ಯ , ಕಟ್ಟಡ ಸಮಿತಿಯ ಅಧ್ಯಕ್ಷ ದಯಾನಂದ ಬಂಟ್ವಾಳ ಸೇರಿದಂತೆ ವಿವಿಧ ವಲಯಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಶಾಂತ್ ಕೆರ್ವಾಶೆ ಸ್ವಾಗತಿಸಿದರು. ಪ್ರಸಾದ ಐಸಿರ ನಿರೂಪಿಸಿದರು.
