ಕಾರ್ಕಳ ನೀರೆ ಗ್ರಾಮ ಪಂಚಾಯತ್ನಲ್ಲಿ 2025-26ನೇ ಸಾಲಿನ ವರ್ಗ -1ರ ಅನುದಾನದಲ್ಲಿನ ಶೇಕಡಾ 25ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅನುದಾನದಲ್ಲಿ ಸವಲತ್ತು ವಿತರಣಾ ಕಾರ್ಯಕ್ರಮ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಚ್ಚಿದಾನಂದ ಎಸ್ ಪ್ರಭುರವರ ಅಧ್ಯಕ್ಷತೆಯಲ್ಲಿ ಡಿ. 29ರಂದು ಜರಗಿತು.

ವಿಕ್ರಂ ಹೆಗ್ಡೆಯವರು ಪ್ರಾಸ್ತಾವಿಕವಾಗಿ ಮಾತನಾಡಿ ನೀರೆ ಗ್ರಾಮ ಪಂಚಾಯತ್ ರಾಜ್ಯದಲ್ಲೇ ಮಾದರಿಯಾಗಿ ಕ್ರಿಯಾಶೀಲ ಚಟುವಟಿಕೆಯಾಗಿ ಕಾರ್ಯನಿರ್ವಹಿಸುತ್ತಿದ್ದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ನೀರಿನ ಟ್ಯಾಂಕ್, ಹಳೆಮನೆ ರಿಪೇರಿಗೆ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಶವಸಂಸ್ಕಾರಕ್ಕೆ ಆರ್ಥಿಕ ಸಹಾಯಧನ ನೀಡುತ್ತಿದ್ದು, ಮೀಸಲಿಟ್ಟ ಅನುದಾನವನ್ನು ವಿನಿಯೋಗಿಸುವಲ್ಲಿ ಗ್ರಾಮ ಪಂಚಾಯತ್ ಸಂಪೂರ್ಣ ಸಫಲವಾಗಿರುತ್ತದೆ. ಇದಲ್ಲದೇ ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆ ಮನೆಗೆ ನಳ್ಳಿ ನೀರಿನ ಸೌಲಭ್ಯ, ಸ್ವಚ್ಚತೆಗೆ ಪ್ರತಿಯೊಬ್ಬರೂ ಪ್ರಾಮುಖ್ಯತೆ ನೀಡಿ ಗ್ರಾಮದ ಅಭಿವೃದ್ದಿಗೆ ಸಹಕರಿಸುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ವಿ ಸುನೀಲ್ ಕುಮಾರ್, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ವಿದ್ಯಾ ಎಸ್ ಶೆಟ್ಟಿ, ತಾಲೂಕು ಪಂಚಾಯತ್ನ ನಿಕಟ ಪೂರ್ವ ಅಧ್ಯಕ್ಷರುಗಳಾದ ವಿಕ್ರಂ ಹೆಗ್ಡೆ, ಶ್ರೀಮತಿ ಮಾಲಿನಿ ಜೆ ಶೆಟ್ಟಿ ಮತ್ತು ಗ್ರಾಮದ ಮುಖಂಡರಾದ ಉಡುಪಿಯ ಖ್ಯಾತ ಉದ್ಯಮಿಗಳಾದ ಸಂತೋಷ್ ವಾಗ್ಳೆ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರಶಾಂತ್ ರಾವ್ ಹಾಗೂ ವಲಯ ಅರಣ್ಯಾಧಿಕಾರಿಗಳಾದ ಪ್ರಭಾಕರ ಕುಲಾಲ್, ದಸ್ತು ಅರಣ್ಯ ಪಾಲಕರಾದ ಶ್ರೀಮತಿ ದಿವ್ಯಾ ಮತ್ತು ಶ್ರೀಧರ್ ನರೇಗಲ್ ಹಾಗೂ ಗ್ರಾಮ ಪಂಚಾಯತ್ನ ಸದಸ್ಯರುಗಳು ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ, ವಲಯ ಅರಣ್ಯಾಧಿಕಾರಿಗಳನ್ನು ಹಾಗೂ ಗಸ್ತು ಅರಣ್ಯ ಪಾಲಕರನ್ನು ಗೌರವಿಸಿ ಸನ್ಮಾನಿಸಲಾಯಿತು.


ರವೀಂದ್ರ ನಾಯಕ್ ಸನ್ಮಾನಿತರ ಪರಿಚಯಗೈದರು. ರಮೇಶ್ ಕಲ್ಲೊಟ್ಟೆ ಕಾರ್ಯಕ್ರಮ ನಿರೂಪಿಸಿದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ನಾಗರಾಜು ಎಂಕೆ ಸ್ವಾಗತಿಸಿದರು. ಶ್ರೀಮತಿ ವಿದ್ಯಾ ಎಸ್ ಶೆಟ್ಟಿ ಧನ್ಯವಾದವಿತ್ತರು.
