ಮೂಡುಬಿದಿರೆ ತಾಲೂಕಿನ ಮಿಜಾರು ಎಂಬ ಅಗಣಿತ ಪ್ರದೇಶ ವ್ಯಾಪ್ತಿ ಹೊಂದಿರುವ ಊರಿನ ಅಧಿದೇವರಾಗಿ ಜನಮಾನಸದಲ್ಲಿ ಮೂಡಿಕೊಂಡಿರುವ ವಿಷ್ಣುಮೂರ್ತಿ ದೇವರ ಹುಟ್ಟು ಬೆಳವಣಿಗೆ ದಾಖಲಿಸಿರುವ ಧಾರ್ಮಿಕ ಹಿನ್ನೆಲೆಯ ಕಥಾಭಾಗ ಹೊಂದಿರುವ ಶ್ರೀ ಮಿಜಾರು ಕ್ಷೇತ್ರ ಮಹಾತ್ಮೆ ಎಂಬ ಪೌರಾಣಿಕ ಯಕ್ಷಗಾನ ಪ್ರಸಂಗ ಫೆ. 03ರಂದು ಲೋಕಾರ್ಪಣೆಗೊಳ್ಳಲಿದೆ. ಶ್ರೀ ವಿಷ್ಣುಮೂರ್ತಿ ಯಕ್ಷಾಭಿಮಾನಿ ಬಳಗ ಮಿಜಾರು-ತೋಡಾರು ಹಾಗೂ ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿ ಬೆಳುವಾಯಿ ಇವರ ಸಂಯೋಜನೆಯಲ್ಲಿ ಪೌರಾಣಿಕ ಯಕ್ಷಗಾನ ಪ್ರಸಂಗ ಶ್ರೀ ಮಿಜಾರು ಕ್ಷೇತ್ರ ಮಹಾತ್ಮೆ ಗ್ರಂಥ ಲೋಕಾರ್ಪಣೆ ಹಾಗೂ ಯಕ್ಷಗಾನ ಬಯಲಾಟ ಕಾರ್ಯಕ್ರಮಮಿಜಾರು ಶ್ರೀ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿ ವಠಾರದಲ್ಲಿ ನಡೆಯಲಿದೆ.

ಮಿಜಾರು ರಮೇಶ್ ಶೆಟ್ಟಿ ಮರಿಯಡ್ಕ ಅವರು ತನ್ನೂರಿನ ಧಾರ್ಮಿಕ ಕಥಾನಕವನ್ನು ಅಧ್ಯಯನ ನಡೆಸಿ ಪೂರ್ವಕಾಲದಲ್ಲಿ ಋಷಿ ಮುನಿಗಳ ತಪೋ ಚಿಂತೆನೆಯಿಂದ ಅರಳಿ ನಿಂತಿರುವ ಗ್ರಾಮದ ಆಧ್ಯಾತ್ಮ ಲೋಕವನ್ನು ಈ ಕಥಾ ಸಂಕಲನದಲ್ಲಿ ಬಹಿರಂಗ ಪಡಿಸಿದ್ದಾರೆ. ಅವರ ಕಥಾರಚನೆಗೆ ಕಟೀಲು ಮುರಳೀಧರ ಭಟ್ ಅವರು ಪದ್ಯರಚನೆ ಮಾಡಿ ಹೆಚ್ಚುಗಾರಿಕೆ ತೋರಿಸಿದ್ದಾರೆ.
ಮೂಡುಬಿದಿರೆ ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಿಜಾರು ರಮೇಶ್ ಶೆಟ್ಟಿ ಮರಿಯಡ್ಕ ಹಾಗೂ ಯಕ್ಷದೇವ ಮಿತ್ರಕಲಾಮಂಡಳಿಯ ಸ್ಥಾಪಕಾಧ್ಯಕ್ಷ ಎಂ. ದೇವಾನಂದ ಭಟ್ ಮತ್ತು ಮಂದಾರ್ ಶೆಟ್ಟಿ ಈ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಗಂಟೆ 1ಕ್ಕೆ ಮಿಜಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ದೇವತಾ ಪ್ರಾರ್ಥನೆ ನಡೆಯಲಿದೆ. ಮಧ್ಯಾಹ್ನ 1.05ಕ್ಕೆ ಚೌಕಿ ಪೂಜೆ ಹಾಗೂ ಯಕ್ಷಗಾನ ಪೂರ್ವರಂಗ ನಡೆಯಲಿದ್ದು, ದೇವರ ರಂಗಸ್ಥಳ ಪ್ರವೇಶದೊಂದಿಗೆ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ದೊರೆಯಲಿದೆ.
ಮಧ್ಯಾಹ್ನ1.45ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಗರುಡ ವಾಹನದಲ್ಲಿ ಪ್ರಸಾದ ಹಾಗೂ ಯಕ್ಷಗಾನ ಪ್ರಸಂಗ ಪುಸ್ತಕವನ್ನು ರಂಗಸ್ಥಳಕ್ಕೆ ಕೊಂಡೊಯ್ಯುವ ವಿನೂತನ ಆಕರ್ಷಣೆಯು ಸಂಪನ್ನಗೊಳ್ಳಲಿದೆ. ಬಳಿಕ ಪ್ರಸಂಗ ಪುಸ್ತಕದ ಲೋಕಾರ್ಪಣೆ, ಕೃತಿಕಾರರಿಗೆ ಸನ್ಮಾನ ಹಾಗೂ ಅತಿಥಿಗಳ ಶುಭಾಶಯ ಭಾಷಣಗಳು ನಡೆಯಲಿವೆ. ಮಧ್ಯಾಹ್ನ 2.45ಕ್ಕೆ ಪ್ರಸಂಗ ಪೀಠಿಕೆ ಆರಂಭವಾಗಲಿದೆ. ರಾತ್ರಿ 8.30ಕ್ಕೆ ಮಂಗಳ ನಡೆಯಲಿದೆ.
ಸಭಾ ಕಾರ್ಯಕ್ರಮವನ್ನು ಮೂಡುಬಿದಿರೆಯ ಶ್ರೀ ಜೈನ ಮಠದ ಡಾ. ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಉದ್ಘಾಟಿಸಲಿದ್ದು, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕರಾದ ವೇ. ಮೂ. ಶ್ರೀ ಹರಿನಾರಯಣದಾಸ ಆಸ್ರಣ್ಣ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ವಹಿಸಲಿದ್ದು, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಶ್ರೀ ಅಭಯಚಂದ್ರ ಜೈನ್, ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ಕುಲದೀಪ್ ಎಂ. ಚೌಟರ ಅರಮನೆ, ಧಾರ್ಮಿಕ ದತ್ತಿ ಇಲಾಖೆ ನಿವೃತ್ತ ಸಹಾಯಕ ಆಯುಕ್ತ ಟಿ.ಜಿ. ಗುರುಪ್ರಸಾದ್, ತೆಂಕುಮನೆ ಎಡಪದವು ಮುರಳೀಧರ ತಂತ್ರಿ, ಮಿಜಾರು ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿಯ ಅನುವಂಶಿಕ ಅರ್ಚಕರು, ದಿನೇಶ್ ಪೆಜತ್ತಾಯ ಪೂಮಾವರಗುತ್ತು , ಮಿಜಾರು ವಿಷ್ಣುಮೂರ್ತಿ ದೇವಸ್ಥಾನ ಅರ್ಚಕ ರಾಘವೇಂದ್ರ ಪೆಜತ್ತಾಯ, ಮರಕಡಗುತ್ತು ಡಾ. ರಂಜಿತ್ ಕುಮಾರ್ ಶೆಟ್ಟಿ, ಮಿಜಾರು ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿಯ ಆಡಳಿತ ಮುಖ್ಯಸ್ಥ ಶಂಕರ ರೈ ಮಿಜಾರುಗುತ್ತು ಹಾಗೂ ಯಕ್ಷದೇವ ಮಿತ್ರಕಲಾ ಮಂಡಳಿ ಬೆಳುವಾಯಿ ದ.ಕ. ಗೌರವಾಧ್ಯಕ್ಷ ಕೆ. ಶ್ರೀಪತಿ ಭಟ್ ಉಪಸ್ಥಿತರಿರಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಯಕ್ಷಗಾನ ರಂಗ ಸಂಯೋಜನೆಯನ್ನು ಕರ್ನಾಟಕ ರಾಜ್ಯೋತ್ಸವ ದಕ್ಷಿಣ ಕನ್ನಡ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಎಂ. ದೇವಾನಂದ ಭಟ್, ಬೆಳುವಾಯಿ ವಹಿಸಲಿದ್ದು, ಈ ಸಂದರ್ಭದಲ್ಲಿ ಪ್ರಸಂಗಕರ್ತರಿಗೆ ಸನ್ಮಾನ ಹಾಗೂ ಅಭಿನಂದನಾ ಭಾಷಣ ನಡೆಯಲಿದೆ. ರಾಮಚಂದ್ರ ನಾಯ್ಕ ಮಿಜಾರು ಕಾರ್ಯಕ್ರಮ ನಿರೂಪಿಸಲಿದ್ದಾರೆ. ಶ್ರೀ ವಿಷ್ಣುಮೂರ್ತಿ ಯಕ್ಷಾಭಿಮಾನಿ ಬಳಗ, ನಮ್ಮ ಜವನೆರ್ ಮಿಜಾರು, ತುಳುನಾಡ ಯುವಕ ಮಂಡಲ ಮಿಜಾರು, ಪಿಲ್ಟಂಡಿ ಸೇವಾ ಸಮಿತಿ ಮರಕಡ, ಗರಡಿ ಫ್ರೆಂಡ್ಸ್ ಮಿಜಾರು ಹಾಗೂ ಮಿಜಾರು-ತೋಡಾರು ಗ್ರಾಮಸ್ಥರು, ವಿವಿಧ ಸಂಘ ಸಂಸ್ಥೆಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುತ್ತಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
