ಸಂತ ಲಾರೆನ್ಸರ ವಾರ್ಷಿಕ ಮಹೋತ್ಸವದ ಕೊನೆಯ ದಿನ ಜ. 29ರಂದು ಪವಿತ್ರ ಬಲಿಪೂಜೆಗಳನ್ನು ವಂ. ರಾಬರ್ಟ್ ಡಿಸೋಜ (ಅಲ್ಲಿಪಾದೆ ಧರ್ಮಗುರು), ವಂ. ಆಲ್ಬರ್ಟ್ ಕ್ರಾಸ್ತಾ (ಪಿಯುಸ್ನಗರ ಧರ್ಮಗುರು), ವಂ. ಜಾನ್ ಪಿರೇರಾ (ಪಾಲೊಟೈನ್ ಸಭೆ, ಕೆರಾ), ವಂ. ಸುನಿಲ್ ಜಾರ್ಜ್ ಡಿಸೋಜ (ಮಂಗಳೂರು ಬಿಸಿಸಿ ನಿರ್ದೇಶಕರು), ವಂ. ಲೂಯಿಸ್ ಡೇಸಾ (ನಕ್ರೆ ಧರ್ಮಗುರು), ವಂ. ವಿನ್ಸೆಂಟ್ ಕ್ರಾಸ್ತಾ (ಸಿಇಎಸ್ಯು ಶಿಕ್ಷಣ ಮಂಡಳಿ ಕಾರ್ಯದರ್ಶಿ, ಉಡುಪಿ) ಬಲಿಪೂಜೆಯನ್ನು ಅರ್ಪಿಸಿದರು ಹಾಗೂ ಇತರ ಅನೇಕ ಯಾಜಕರು ಸಾಂಭ್ರಮಿಕ ಬಲಿಪೂಜೆಯಲ್ಲಿ ಭಾಗವಹಿಸಿದರು.

ಮುಖ್ಯ ಸಾಂಭ್ರಮಿಕ ಭವ್ಯ ಬಲಿಪೂಜೆಯನ್ನು ಬೆಳಿಗ್ಗೆ 10.00 ಗಂಟೆಗೆ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಪರಮಪೂಜ್ಯ ಡಾ. ಪೀಟರ್ ಪೌಲ್ ಸಲ್ಡಾನ್ಹಾರವರು ಅರ್ಪಿಸಿದರು. ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಮತ್ತು ಬಾಸಿಲಿಕಾದ ರೆಕ್ಟರ್ ಸೇರಿದಂತೆ ಹಲವಾರು ಯಾಜಕರು ಸಹಭಾಗಿತರಾಗಿದ್ದರು. ತಮ್ಮ ಪ್ರವಚನದಲ್ಲಿ ಪರಮಪೂಜ್ಯ ಪೀಟರ್ ಪೌಲ್ “ನಾನು ನಿನ್ನನ್ನು ಪ್ರೀತಿಸಿದ್ದೇನೆ” ಜಗದ್ಗುರುಗಳ ಪ್ರೇಷಿತ ಪತ್ರದ ಮೇರೆಗೆ ಬಡವರ ಪ್ರೀತಿ ಎಂಬ ವಿ?ಯವನ್ನು ಆಧರಿಸಿ, ದೇವರು ಮಾನವನನ್ನು ಯಾವುದೇ ಶರತ್ತುಗಳಿಲ್ಲದೆ ಪ್ರೀತಿಸುವಂತೆ ನಾವು ಸಹ ಪರಸ್ಪರ ನಿರ್ವ್ಯಾಜವಾಗಿ ಪ್ರೀತಿಸಬೇಕು ಎಂದು ಭಕ್ತರನ್ನು ಪ್ರೇರೇಪಿಸಿದರು.

ಬಸಿಲಿಕಾದ ರೆಕ್ಟರ್ ವಂ. ಆಲ್ಬನ್ ಡಿಸೋಜರವರು ಮಹೋತ್ಸವದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಪರಮಪೂಜ್ಯ ಜೆರಾಲ್ಡ್ ಲೋಬೊ ಅವರು ಬಸಿಲಿಕಾದ ರೆಕ್ಟರ್ ಹಾಗೂ ಯಾಜಕರಿಗೆ ಧನ್ಯವಾದಗಳನ್ನು ಸಲ್ಲಿಸಿ, ಬಸಿಲಿಕಾದ ಭವಿಷ್ಯದ ಯೋಜನೆಗಳನ್ನು ಹಂಚಿಕೊಂಡು ಭಕ್ತರ ಪ್ರಾರ್ಥನೆ ಹಾಗೂ ಸಹಕಾರವನ್ನು ಕೋರಿದರು. ಮಹೋತ್ಸವಕ್ಕೆ ಉದಾರವಾಗಿ ದೇಣಿಗೆ ನೀಡಿದ ಧರ್ಮಕೇಂದ್ರದ ಸದಸ್ಯರು ಹಾಗೂ ಭಕ್ತರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ, ಶ್ರೀನಿವಾಸ್ ಸಾಲ್ಯಾನ್ (ಬೊಂದೆಲ್) ಅವರು ರಚನೆ ಹಾಗೂ ನಿರ್ದೇಶನ ಮಾಡಿದ “ಧರ್ಮ ರಕ್ಷಣೆ” ಎಂಬ ಯಕ್ಷಗಾನವನ್ನು ‘ಕಲಾಕರ್, ಮಂಗಳೂರು’ ತಂಡವು ಪ್ರದರ್ಶಿಸಿತು.
ರಾತ್ರಿ ವೇಳೆ ಅದ್ಭುತ ಸಂತ ಲಾರೆನ್ಸ್ ಅವರ ಮೂರ್ತಿಯನ್ನು ವಿಧಿವಿಧಾನಗಳೊಂದಿಗೆ ವಂದನೆ ಸಲ್ಲಿಸಿ ಪುನಃ ಮೂಲಸ್ಥಾನಕ್ಕೆ ಭವ್ಯವಾಗಿ ಮರಳಿಸಲಾಯಿತು. ಹಾಗೆಯೇ ಧ್ವಜವರೋಹಣ ಮಾಡುವ ಮೂಲಕ 2026ರ ಸಂತ ಲಾರೆನ್ಸರ ವಾರ್ಷಿಕ ಹಬ್ಬ ಮುಕ್ತಾಯಗೊಂಡಿತು.

ವಿನುಪ್ ಕಾರ್ಕಳ ಅವರ ನೇತೃತ್ವದಲ್ಲಿ ವಿವಿಧ ಧರ್ಮಕೇಂದ್ರಗಳ ಸ್ವಯಂಸೇವಕರು ಮಹೋತ್ಸವದ ಯಶಸ್ಸಿಗಾಗಿ ಮಹತ್ವದ ಸೇವೆ ಸಲ್ಲಿಸಿದರು. ಮಾಧ್ಯಮ ಕಾರ್ಯಗಳನ್ನು ವಂ. ಆಲ್ವಿನ್ ಸಿಕ್ವೇರಾ, ಕಾರ್ಮೆಲ್ ಸಭೆ ಮತ್ತು ಶ್ರೀ ಜೀವನ್ ಮಸ್ಕರೇನ್ಹಾಸ್ ಸಂಯೋಜಿಸಿದರು. ಉಪಾಧ್ಯಕ್ಷ ಸಂತೋಷ್ ಡಿಸಿಲ್ವಾ ಮತ್ತು ಕಾರ್ಯದರ್ಶಿ ರೊನಾಲ್ಡ್ ನೊರೊನ್ಹಾ, ಜೊತೆಗೆ ನಿಗದಿತ ಉಪಾಧ್ಯಕ್ಷ ವಂದಿಶ್ ಮಥಿಯಾಸ್ ಮತ್ತು ಕಾರ್ಯದರ್ಶಿ ಮೆಲ್ವಿನ್ ಕ್ಯಾಸ್ಟೆಲಿನೊ ಉಪಸ್ಥಿತರಿದ್ದು ಎಲ್ಲಾ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡಿದರು.
