ಮೂಡುಬಿದಿರೆ ಶ್ರೀ ರಾಮಪುರ ಗೌರಿಕೆರೆ ಶ್ರೀ ರಾಮ ಮಂದಿರದಲ್ಲಿ ಆರಾಧನೆ ಗೊಳ್ಳುತ್ತಿರುವ ಶ್ರೀ ರಾಮದೇವರ ಸಪರಿವಾರ ಬಿಂಬ ಪುನರ್ ಪ್ರತಿಷ್ಠೆ ಹಾಗೂ ಅಷ್ಟ ಬಂದ ಬ್ರಹ್ಮಕಲಶೋತ್ಸವ ಮೇ 6ರಿಂದ ಪ್ರಾರಂಭಗೊಂಡು 10ರವರೆಗೆ ವಿಜ್ರಂಭಣೆಯಿಂದ ಜರಗಲಿದೆ ಎಂದು ದೇವಾಡಿಗ ಸುಧಾರಕ ಸಂಘದ ಅಧ್ಯಕ್ಷ ಪುರಂದರ ದೇವಾಡಿಗ ಹಾಗೂ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರತ್ನಾಕರ ಸಿ ಮೊಯ್ಲಿ ಯವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸುಮಾರು ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಶ್ರೀ ರಾಮ ಮಂದಿರದ ಗರ್ಭಗುಡಿ ಕೆಳ ಅಂತಸ್ತಿನ ಮೇಲ್ಛಾವಣಿಗೆ ಮರದ ಮುಚ್ಚಳಿಕೆ ಸಹಿತ ತಾಮ್ರದ ಹೊದಿಕೆ, ಗರ್ಭಗುಡಿಯ ಸುತ್ತುಪೌಳಿಯ ಮರದ ದರಿಗೆ ಹಿತ್ತಾಳೆಯ ಹೊದಿಕೆ, ಮುಖ್ಯ ದ್ವಾರಕ್ಕೆ ಹಿತ್ತಾಳೆ ಹೊದಿಕೆ, ಗ್ರಾನೈಟ್ ಅಳವಡಿಕೆ ಮಾಡಲಾಗಿದೆ. ಶಿಲಾಮಯ ರಕ್ತೇಶ್ವರಿ ಗುಡಿ, ಚಾಮುಂಡಿ ದೇವಿಯ ಗುಡಿ ನಿರ್ಮಿಸಲಾಗಿದೆ. ಇಂದು ಗೋಷ್ಠಿಯಲ್ಲಿ ಮಾಹಿತಿಯಿತ್ತರು. ಸಭಾಭವನದ ಅನ್ನಚತ್ರ, ಪಾಕಶಾಲೆಯನ್ನು ಅಭಿವೃದ್ಧಿ ಮಾಡಿ ಆಧುನೀಕರಿಸಲಾಗಿದೆ ಎಂದು ತಿಳಿಸಿದರು.
ಮೇ 6ರಂದು ಹೋಮ, ಕಂಕಣ ಬಂಧ, ಆದ್ಯಗಣಯಾಗ, ಬಿಂಬ ಶುದ್ದಿ, ಮಹಾಪೂಜೆ, ಸುದರ್ಶನ ಹೋಮ, ವಾಸ್ತು ಹೋಮ, ಸೇರಿದಂತೆ ಧಾರ್ಮಿಕ ವಿಧಿ ವಿಧಾನಗಳು ಜರಗಲಿದೆ.
ಅಂದು ಅಪರಾಹ್ನ ಭಜನೆ, ಸಭಾ ಕಾರ್ಯಕ್ರಮ, ರಾತ್ರಿ ನೃತ್ಯ ವೈವಿಧ್ಯ ಜರಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೇ 7ರಂದು ಶ್ರೀ ಸೀತಾ ರಾಮಚಂದ್ರ, ಲಕ್ಷ್ಮಣ, ಹನುಮಂತ ಪರಿವಾರ ರಕ್ತೇಶ್ವರಿ, ಚಾಮುಂಡಿ ಸಹಿತ ಬಿಂಬ ಪ್ರತಿಷ್ಠ, ಅಷ್ಟಬಂಧ ಲೇಪನ, ಕಲಶ ಮಂಡಲ ಪೂಜೆ, ಮಹಾ ಪೂಜೆ, ಅಧಿವಾಸ ಹೋಮಗಳು ಹಾಗೂ ಧಾರ್ಮಿಕ ವಿಧಿ ವಿಧಾನಗಳು ಜರಗಲಿದೆ. ಅಂದು ಬೆಳಿಗ್ಗೆ ಸಾಂಸ್ಕೃತಿಕ ಕಾರ್ಯಕ್ರಮ ದಂಗವಾಗಿ ಸ್ಯಾಕ್ಸ್ ಫೋನ್ ವಾದನ ಅಪರಾಹ್ನ ಭಜನೆ, ಸಾಯಂಕಾಲ ಸಭಾ ಕಾರ್ಯ ಕ್ರಮ, ರಾತ್ರಿ ಪುಂಡಿಪನವು ಪ್ರಸಂಗ ಪ್ರದರ್ಶನಗೊಳ್ಳಲಿದೆ.
ಮೇ8ರಂದು ಬೆಳಿಗ್ಗೆ ಮಿಥುನ ಲಗ್ನ ಸುಮುಹೂರ್ತದಲ್ಲಿ ಶ್ರೀ ರಾಮ ದೇವರಿಗೆ 108ಕಲಶ ಸಹಿತ ಬ್ರಹ್ಮ ಕಲಶ ಅಭಿಷೇಕ ಹಾಗೂ ಪರಿವಾರ ಶ್ರೀ ರಕ್ತೇಶ್ವರಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿಗೆ ಕಲಶಾಭಿಷೇಕ, ಸಾಯಂಕಾಲ ಧಾರ್ಮಿಕ ಸಭೆ, ಬೆಳಿಗ್ಗೆ ನಾಗಸ್ವರ ವಾದನ, ಚೆಂಡೆ ವಾದನ ಸೇವೆ, ಸಾಯಂಕಾಲ ಧಾರ್ಮಿಕ ಸಭೆ, ರಾತ್ರಿ ದೇವದಾಸ್ ಕಾಪಿಕಾಡ್, ಭೋಜರಾಜ್ ವಾಮಂಜೂರು, ಸಾಯಿ ಕೃಷ್ಣ ಅಭಿನಯದ ಪನ್ನಿಯರೆ ಆವಂದಿನ ನಾಟಕ ಪ್ರದರ್ಶನಗೊಳ್ಳಲಿದೆ. ಮೇ 9ರಂದು ಬೆಳಿಗ್ಗೆ ರಾಮ ತಾರಕ ಹೋಮ, ಮಹಾಪೂಜೆ, ಮಹಾ ಭಜನೆ ಸಂಕೀರ್ತನೆ, ಸ್ಯಾಕ್ಸ್ ಫೋನ್ ನಾದ ವೈಭವ, ಅಪರಾಹ್ನ ಯಕ್ಷಗಾನ ತಾಳ ಮದ್ದಲೆ ವಾಲಿಮೋಕ್ಷ ಅಹೋ ರಾತ್ರಿ ಭಜನಾ ಕಾರ್ಯಕ್ರಮ ನಡೆಯಲಿದೆ.
ಮೇ ಹತ್ತರಂದು ಬೆಳಿಗ್ಗೆ ಮಹಾಚಂಡಿಕಾಯಾಗ, ನಾಗಸ್ವರ ವಾದನ, ಭಜನೆ, ಸಾಯಂ. ದೊಡ್ಡ ರಂಗ ಪೂಜೆ, ರಕ್ತೇಶ್ವರಿ ದೈವಕ್ಕೆ ಗಗ್ಗರ ಸೇವೆ ನಡೆಯಲಿದೆ. ಬ್ರಹ್ಮ ಕಲಶೋತ್ಸವದ ಅಂಗವಾಗಿ ಮೇ ಐದು ರಂದು ಮೂಡುಬಿದಿರೆ ಸ್ವರಾಜ್ಯ ಮೈದಾನದಿಂದ ಸಾಯಂಕಾಲ ಗಂಟೆನಾಲ್ಕಕ್ಕೆ ಹೊರೆ ಕಾಣಿಕೆ ಮೆರವಣಿಗೆ ನಡೆಯಲಿದೆ.
ಗೋಷ್ಠಿಯಲ್ಲಿ ಸಂಘದ ಕೋಶಾಧ್ಯಕ್ಷ ಯಶೋಧರ ದೇವಾಡಿಗ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಪಿ ದೇವಾಡಿಗ, ಸದಸ್ಯ ಸೋಮನಾಥ್ ಭಾಗವಹಿಸಿದ್ದರು.
