ವರಂಗ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ದಿ. ಸಂತೋಷ್ ನಾಯ್ಕ್ ಅವರ ನುಡಿ ನಮನ ಕಾರ್ಯಕ್ರಮವು ಮುನಿಯಾಲಿನ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ನೆರವೇರಿತು.

ಕಾರ್ಯಕ್ರಮದಲ್ಲಿ ಕಾರ್ಕಳ ಶಾಸಕರಾದ ಸುನೀಲ್ ಕುಮಾರ್ ಮಾತನಾಡಿ, ಸಮಾಜಮುಖಿ ಸೇವೆಗಳ ಮೂಲಕ ಜನಮನ ಗೆದ್ದಿದ್ದ ಸಂತೋಷ್ ನಾಯ್ಕ್ ಅವರ ಕೊಡುಗೆಯನ್ನು ಸ್ಮರಿಸಿದರು. ಅವರು ಸಮಾಜಕ್ಕಾಗಿ ಸಲ್ಲಿಸಿದ ಸೇವೆ ಸದಾ ಸ್ಮರಣೀಯವಾಗಿದ್ದು, ಅವರ ಕುಟುಂಬದ ಪರವಾಗಿ ಸಮಾಜವು ನಿಲ್ಲಬೇಕೆಂದು ಕರೆ ನೀಡಿದರು.

ಸಭೆಯಲ್ಲಿ ಹಿಂದೂ ಹೆಲ್ಪ್ಲೈನ್ ಜನಸೇವಾ ಟ್ರಸ್ಟ್ನ ಗೌರವಾಧ್ಯಕ್ಷರಾದ ಡಾ. ಸುದರ್ಶನ್ ಹೆಬ್ಬಾರ್, ಅಧ್ಯಕ್ಷರಾದ ರಾಜೇಶ್ ಶೆಟ್ಟಿ, ತಾಲೂಕು ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಪ್ರಭಾಕರ ಪೂಜಾರಿ, ಸುಧಾಕರ ಶೆಟ್ಟಿ, ಪ್ರಜ್ಞಾ ವಿ, ಕಬಡ್ಡಿ ತರಬೇತುದಾರ ರಮೇಶ್ ಸುವರ್ಣ ಅಜೆಕಾರು, ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಪೂಜಾರಿ ಹಾಗೂ ರಾಮಚಂದ್ರ ನಾಯಕ್ ಉಪಸ್ಥಿತರಿದ್ದು ನುಡಿ ನಮನ ಸಲ್ಲಿಸಿದರು.


ದಿ. ಸಂತೋಷ್ ನಾಯ್ಕ್ ಅವರ ಸಮಾಜಸೇವೆಯ ಕಾರ್ಯಗಳನ್ನು ಸ್ಮರಿಸಿ, ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಸಭೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
