ಅಖಿಲ ಭಾರತ ಮಾಧ್ವ ಮಹಾ ಮಂಡಲ, ಶ್ರೀ ಪೇಜಾವರ ಮಠ ಉಡುಪಿ 30 ನೇ ತತ್ವಜ್ಞಾನ ಸಮ್ಮೇಳನ -ಪೆರಣಂಕಿಲ -2025 ಇದರ ಪೂರ್ವಭಾವಿಯಾಗಿ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಸಂಕಲ್ಪದಂತೆ 108 ತತ್ವಜ್ಞಾನ ಮಹೋತ್ಸವ ಅಂಗವಾಗಿ ಹೆಬ್ರಿಯ ಶ್ರೀ ವಿಶ್ವೇಶಕೃಷ್ಣ ಗೋಶಾಲೆಯಲ್ಲಿ ಹೆಬ್ರಿ ಹಾಗೂ ಅಜೆಕಾರು ವಲಯ ಬ್ರಾಹ್ಮಣ ಸಂಘ, ಹೆಬ್ರಿ ತಾಲೂಕು ವಿಪ್ರ ಮಹಿಳಾ ವೇದಿಕೆ, ಧಾರ್ಮಿಕ ಶಿಕ್ಷಣ ಶಿಬಿರ ಸಮಿತಿ ಹೆಬ್ರಿ ಹಾಗೂ ತತ್ವಜ್ಞಾನ ಮಹೋತ್ಸವ ಸಮಿತಿಯ ಸಹಯೋಗದೊಂದಿಗೆ ಶ್ರೀ ವಿಶ್ವೇಶಕೃಷ್ಣ ಗೋಸೇವಾ ಟ್ರಸ್ಟ್ ನ ನೇತೃತ್ವದಲ್ಲಿ ತತ್ವಜ್ಞಾನ ಮಹೋತ್ಸವ ಸಂಪನ್ನ ಗೊಂಡಿತು.
ದೆಹಲಿಯ ಉದ್ಯಮಿ ಶ್ರೀಮತಿ ನೀರಾ ರಾಡಿಯರವರ ಗೋಗ್ರಾಸ ಸೇವೆಯ ಮೂಲಕ ಗೋಪೂಜೆಯೊಂದಿಗೆ ಶ್ರೀ ವಿಷ್ಣು ಸಹಸ್ರನಾಮ,ಲಕ್ಷ್ಮೀ ಶೋಭಾನೆ ಪಾರಾಯಣದ ಮೂಲಕ ಆರಂಭವಾಗಿ ವಿದ್ವಾನ್ ಶ್ರೀ ಸಗ್ರಿ ಆನಂದತೀರ್ಥ ಉಪಾಧ್ಯಾಯ ಹಾಗೂ ವಿದ್ವಾನ್ ಶ್ರೀ ಕೃಷ್ಣರಾಜ ಭಟ್ ಕುತ್ಪಾಡಿ ಯವರಿಂದ ಸಂವಾದ ರೂಪದಲ್ಲಿ ರಾಮಾಯಣ ಮಹಾಭಾರತದ ಪ್ರವಚನ ನಡೆಯಿತು.
ಹೆಬ್ರಿಯ ಅಮೃತ ಭಾರತಿ ವಿದ್ಯಾಲಯದ 125 ವಿದ್ಯಾರ್ಥಿಗಳು ಭಾಗವಹಿಸಿ ರಾಮಾಯಣ ಮಹಾಭಾರತಕ್ಕೆ ಸಂಬಂಧ ಪಟ್ಟು ಅನೇಕ ಪ್ರಶ್ನೆಗಳನ್ನು ಕೇಳುವ ಮೂಲಕ ಸಂವಾದ ರೂಪದ ಪ್ರವಚನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದುಕೊಟ್ಟರು.
ಪರಮ ಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ನಮ್ಮೆಲ್ಲರ ಬದುಕಿಗೆ ಪ್ರೇರಣೆ ಮತ್ತು ಮಾರ್ಗದರ್ಶನ ನೀಡುವ ಅತ್ಯಮೂಲ್ಯ ಕಾವ್ಯ ರಾಮಾಯಣ. ಅದರ ಸಾರವನ್ನು ಅರಿತುಕೊಂಡು ರಾಮದೇವರ ಅನುಗ್ರಹವನ್ನು ಪಡೆಯೋಣ ಮತ್ತು ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ದೇಶದ ಭವ್ಯ ಸಂಸ್ಕೃತಿಯನ್ನು ಅನುದಿನವೂ ಪಾಲಿಸುಕೊಳ್ಳುವ ಮೂಲಕ ಸುಖ, ಶಾಂತಿ, ನೆಮ್ಮದಿಯನ್ನು ಕಂಡುಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಾಮೂಹಿಕವಾಗಿ ರಾಮ ತಾರಕ ಮಂತ್ರ ಜಪ ಹಾಗೂ ಅನ್ನ ಸಂತರ್ಪಣೆ ನಡೆಯಿತು.
ಹೆಬ್ರಿ ರಾಮಕೃಷ್ಣ ಆಚಾರ್ಯ, ಅಜೆಕಾರು ನಾಗರಾಜ ಪುತ್ರಾಯ, ಶ್ರೀಮತಿ ಶೋಭಾ ಕಲ್ಕೂರ್, ಶ್ರೀಮತಿ ಅಪರ್ಣಾ ಆಚಾರ್ಯ, ವೇದವ್ಯಾಸ ತಂತ್ರಿ, ನಿತಿನ್ ಶೆಟ್ಟಿ, ಗೋಶಾಲೆಯ ಟ್ರಸ್ಟಿಗಳಾದ ತಾರಾನಾಥ್ ಬಲ್ಲಾಳ್, ಬಾಲಕೃಷ್ಣ ನಾಯಕ್, ಲಕ್ಷ್ಮಣ ಭಟ್, ವಿಷ್ಣುಮೂರ್ತಿ ಆಚಾರ್ಯ, ಗಿಲ್ಲಾಳಿ ಪದ್ಮನಾಭ ಆಚಾರ್ಯ ಉಪಸ್ಥಿತರಿದ್ದರು.
ವಿದ್ವಾನ್ ಗುರುರಾಜ ಕಲ್ಕೂರ ಸ್ವಾಗತಿಸಿ, ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.