ಮೂಡುಬಿದಿರೆ: 60ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಮೂಡುಬಿದಿರೆ ಶ್ರೀ ಮಹಾವೀರ ಪದವಿಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮವು ನಡೆಯಿತು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ನಿರ್ದೇಶಕರು ಮತ್ತು ವಿಶ್ವಸ್ಥ ಮಂಡಳಿಯ ಸದಸ್ಯರು ವೈಬ್ರೆಂಟ್ ಎಜುಕೇಶನ್ ಮತ್ತುಚಾರಿಟಬಲ್ ಟ್ರಸ್ಟ್ನ ಡಾ. ಶರತ್ಗೋರೆ ಮಾತನಾಡಿ “ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣವನ್ನು ಕಳೆದ ಅನೇಕ ದಶಕಗಳಿಂದ ಈ ಕಾಲೇಜು ನೀಡುತ್ತಿದೆ. ಇಲ್ಲಿ ವಿದ್ಯಾದಾನ ಮಾಡುತ್ತಿರುವ ಸರ್ವರಿಗೂ ಅಭಿನಂದನೆ. ಯಾರಿಂದಲೂ ಕಿತ್ತುಕೊಳ್ಳಲಾಗದ ಜ್ಞಾನವನ್ನು ಪಡೆಯುವುದರೊಂದಿಗೆ ವಿದ್ಯಾರ್ಥಿಗಳು ಶಿಸ್ತು, ಗುಣಮಟ್ಟ ಮತ್ತು ಋಜುಮಾರ್ಗದಲ್ಲಿ ನಡೆದರೆ ಯಶಸ್ಸು ಸಾಧಿಸಬಹುದು” ಎಂದು ಅನೇಕ ನೈಜ ಉದಾಹರಣೆಗಳೊಂದಿಗೆ ವಿವರಿಸಿದರು.

ಇನ್ನೊರ್ವ ಮುಖ್ಯ ಅತಿಥಿ ಶ್ರೀ ಮಹಾವೀರ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರು, ಭೌತಶಾಸ್ತ್ರ ಪ್ರಾಧ್ಯಪಕರಾದ ಪ್ರೊ.ಎಂ. ರಮೇಶ್ ಭಟ್ ಮಾತನಾಡುತ್ತ, ಈ ಕಾಲೇಜಿನಲ್ಲಿ ತಮ್ಮ ಸೇವಾವಧಿಯ ಉದ್ದಕ್ಕೂ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಹದ್ಯೋಗಿಗಳು ನೀಡಿದ ಸಹಕಾರವನ್ನು ಸ್ಮರಿಸಿದರು.“ಕಾಲೇಜಿನಲ್ಲಿರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಇಷ್ಟಪಟ್ಟು ಓದಬೇಕು, ನೀವು ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿದರೂ ಆಸಕ್ತಿಯಿಂದ ಕೆಲಸ ಮಾಡಬೇಕು. ಎಲ್ಲರಿಗೂ ಒಳಿತನ್ನು ಬಯಸಿದರೆ ಅದೃಷ್ಟ ಸದಾ ನಿಮ್ಮೊಂದಿಗೆ ಇರುತ್ತದೆ” ಎಂದರು.

ಪದವಿ ಕಾಲೇಜಿನ ಪ್ರಾಂಶುಪಾಲ ಮೇ.ಡಾ. ರಾಧಾಕೃಷ್ಣ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ, “ಜೀವನದಲ್ಲಿ ನೀವು ಕನಸುಗಳನ್ನು ಇಟ್ಟುಕೊಳ್ಳಬೇಕು ಅದನ್ನು ನನಸಾಗಿಸುವ ಮೂಲಕ ಗುರಿ ಮುಟ್ಟಲು ಪ್ರಯತ್ನಿಸಬೇಕು. ಸಮಯ ಅಮೂಲ್ಯವಾದದ್ದು, ಶಿಸ್ತುಬದ್ಧ ಕಠಿಣ ಪರಿಶ್ರಮದಿಂದ ಸಾಧಿಸಬಹುದು”ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಸಂಪತ್ ಸಾಮ್ರಾಜ್ಯ ಮಾತನಾಡಿ, “ಕಲಿಕೆ ಎಂದೂ ಮುಗಿಯುವುದಿಲ್ಲ ಪ್ರಯತ್ನಪಟ್ಟರೆ ನಾವು ಏನನ್ನು ಬೇಕಾದರೂ ಸಾಧಿಸಬಹುದು. ಜೀವನದಲ್ಲಿ ಬದ್ಧತೆ, ಆಸಕ್ತಿ ಮತ್ತು ಅತ್ಯುತ್ತಮ ವ್ಯಕ್ತಿತ್ವ ಇದ್ದರೆ ಗುರಿ ಸಾಧಿಸಲು ಸಾಧ್ಯ” ಎಂದರು.

ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಕ್ರೀಡಾ ಸಾಧನೆಗೆ ಬಹುಮಾನವನ್ನು ವಿತರಿಸಲಾಯಿತು. ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಎಂ. ರಮೇಶ್ ಭಟ್ ಇವರ ಸಾರ್ಥಕ ಸೇವೆಯನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಹರೀಶ್, ಪದವಿಪೂರ್ವ ವಿಭಾಗದ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಪೂರ್ಣಿಮ ಮತ್ತು ಸಂಯುಕ್ತ ಕಾರ್ಯದರ್ಶಿ ಶಾಲಿನಿ ಉಪಸ್ಥಿತರಿದ್ದರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಲೆಫ್ಟಿನೆಂಟ್ ವಿಜಯಲಕ್ಷ್ಮೀ ವಾರ್ಷಿಕ ವರದಿ ವಾಚಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಪೂರ್ಣಿಮ ಸ್ವಾಗತಿಸಿ, ಶಾಲಿನಿ ವಂದಿಸಿ, ರಮೀಜಾ ಫಾತಿಮ ನಿರೂಪಿಸಿದರು.
