ಹೆಬ್ರಿ: ಮುದ್ರಾಡಿ ಗ್ರಾಮದ ಬಲ್ಲಾಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದೀರ್ಘ 30 ವರ್ಷಗಳ ಕಾಲ ಸೇವೆ ಸಲ್ಲಿಸಿ ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಶಾಲೆಯ ಏಳಿಗೆಯಲ್ಲಿ ಸದಾ ತೊಡಗಿಸಿಕೊಂಡು ಅಂಡಾರು ಹಿರಿಯ ಪ್ರಾಥಮಿಕ ಶಾಲೆಗೆ ಮುಖ್ಯ ಶಿಕ್ಷಕರಾಗಿ ಪದೋನ್ನತಿಗೊಂಡ ಶ್ರೀಪತಿ ಬಡ್ಕಿಲ್ಲಾಯ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ಶಿಕ್ಷಕ ಶ್ರೀಪತಿ ಬಡ್ಕಿಲ್ಲಾಯ ನಿಸ್ವಾರ್ಥ ಸೇವೆಯನ್ನು ಸ್ಮರಿಸಿಕೊಳ್ಳುತ್ತಾ ಅವರಿಗೆ ಶುಭವನ್ನು ಕೋರಿ ಮುದ್ರಾಡಿಯ ಹಿರಿಯ ಸಮಾಜ ಸೇವಕರಾದ ಗಣಪತಿ ಎಂ, ಮುದ್ರಾಡಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್, ನಿವೃತ್ತ ಪ್ರಿನ್ಸಿಪಾಲ್ ಹೆಬ್ರಿ ವಾಸುದೇವ ಭಟ್, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಪೂಜಾರಿ ನೆಕ್ಕರ್ ಬೆಟ್ಟು ಮಾತನಾಡಿದರು.
ಹಿರಿಯರಾದ ಬಲ್ಲಾಡಿ ಗೋಪಾಲ ಆಚಾರ್ಯ ದೀಪ ಬೆಳಗಿಸಿ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಶಾಲೆಯ ಹಳೆ ವಿದ್ಯಾರ್ಥಿಗಳಾದ ಪ್ರತೀಕ್ಷಾ ಕುಲಾಲ್, ಸಮೀಕ್ಷಾ ಕುಲಾಲ್ ಹಾಗೂ ಸೃಜನ್ ಅವರನ್ನು ಸನ್ಮಾನಿಸಲಾಯಿತು. ದಾನಿಗಳು ನೀಡಿದ ಉಚಿತ ನೋಟ್ ಬುಕ್ ಗಳನ್ನು ಗಣಪತಿ ಎಂ. ಶಾಲಾ ಮಕ್ಕಳಿಗೆ ವಿತರಿಸಿದರು.
ಸನ್ಮಾನಿತರಾದ ಶ್ರೀಪತಿ ಬಡ್ಕಿಲ್ಲಾಯರು ತನ್ನ ಸೇವೆಯಲ್ಲಿ ಸಹಕರಿಸಿದ ಎಲ್ಲರನ್ನೂ ಸ್ಮರಿಸಿ ಕೃತಜ್ಞತೆ ಸಲ್ಲಿಸಿ ಮಾತನಾಡಿದರು. ವೇದಿಕೆಯಲ್ಲಿ ಬಲ್ಲಾಡಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಗುರುಪ್ರಸಾದ್ ಹೆಗ್ಡೆ ಕೊಳಂಬೆ, ಗ್ರಾಮಾಭಿವೃದ್ಧಿ ಯೋಜನೆ ಮುದ್ರಾಡಿ ವಲಯ ಮೇಲ್ವಿಚಾರಕರಾದ ಉಮೇಶ್ ಬಿ. ಕೆ., ಉಪನ್ಯಾಸಕ ವಿನಾಯಕ ಪೂಜಾರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್ ಆಚಾರ್ಯ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ಪೂಜಾರಿ, ಅಂಗನವಾಡಿ ಶಿಕ್ಷಕಿ ಶಾಂತಾ, ಪಂಚಾಯತ್ ನಿಕಟಪೂರ್ವ ಸದಸ್ಯೆ ರತ್ನಾ ಪೂಜಾರಿ, ಸೇವಾಪ್ರತಿನಿಧಿ ಮಮತಾ, ಶಾಲೆಯ ಹಳೆ ವಿದ್ಯಾರ್ಥಿಗಳು,ಗ್ರಾಮಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಲಿಕಾ ಸಾಧಕ ವಿದ್ಯಾರ್ಥಿಗಳಿಗೆ ಸಂಸ್ಥೆಯ ಹಳೆ ವಿದ್ಯಾರ್ಥಿ ದಾಮೋದರ ಆಚಾರ್ಯ ನಗದು ಬಹುಮಾನ ನೀಡಿ ಸಹಕರಿಸಿದರು. ಗೌರವ ಶಿಕ್ಷಕಿ ಚಿತ್ರಾ ಸಮ್ಮಾನ ಪತ್ರ ವಾಚಿಸಿದರು. ಶಾಲಾ ಮುಖ್ಯ ಶಿಕ್ಷಕ ಗಣಪತಿ ನಾಯಕ್ ಕಾರ್ಯಕ್ರಮ ನಿರೂಪಿಸಿ, ಗೌರವ ಶಿಕ್ಷಕಿ ರೇಖಾ ವಂದಿಸಿದರು. ಶಾಲಾ ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
